ಕುತುಬ್ ಮಿನಾರ್ ಕೆಳಗಿರುವ 27 ಹಿಂದೂ, ಜೈನ ದೇವಾಲಯ ಮರುಸ್ಥಾಪನೆಗೆ ಅರ್ಜಿ
ನವದೆಹಲಿ, ಡಿಸೆಂಬರ್ 10: ಪ್ರಸಿದ್ಧ ಕುತುಬ್ ಮಿನಾರ್ ಕೆಳಗೆ 27 ಹಿಂದೂ, ಜೈನ ದೇಗುಲಗಳಿದ್ದು ಅವುಗಳನ್ನು ಮರುಸ್ಥಾಪಿಸಬೇಕು ಹಾಗೂ ಅಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಪ್ರಸ್ತುತ ಕುತುಬ್ ಮಿನಾರ್ ಇರುವ ಸ್ಥಳದಲ್ಲಿ ಈ ಹಿಂದೆ ಜೈನ ತೀರ್ಥಂಕರರ, ವಿಷ್ಣು, ಗಣೇಶ, ಶಿವ, ಗೌರಿ, ಸೂರ್ಯದೇವ, ಹನುಮನ ದೇಗುಲ ಸೇರಿದಂತೆ ಸುಮಾರು 27 ಹಿಂದೂ ದೇಗುಲಗಳಿದ್ದು, ಇವುಗಳನ್ನು ಕುತುಬ್ ದಿನ್ ಐಬಕ್ ಧ್ವಂಸಗೊಳಿಸಿ ಅಲ್ಲಿ ಮಿನಾರ್ ನಿರ್ಮಿಸಿದ್ದ. ಹೀಗಾಗಿ ಈ ದೇಗುಲಗಳನ್ನು ಮರು ಸ್ಥಾಪಿಸಿ ಅಲ್ಲಿ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ವಕೀಲರಾದ ಹರಿಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ದೇಗುಲದ ದುರಸ್ತಿ ಕೆಲಸ, ನಿರ್ಮಾಣ ಕಾಮಗಾರಿಗಳಲ್ಲಿ ಹಾಗೂ ಪೂಜೆ, ದರ್ಶನದ ವಿಚಾರದಲ್ಲಿ ಕೇಂದ್ರ ಸರ್ಕಾರ (ಸಂಸ್ಕೃತಿ ಇಲಾಖೆ) ಮತ್ತು ಭಾರತೀಯ ಪ್ರಾಚ್ಯವಸ್ತು ಇಲಾಖೆ ಮಧ್ಯ ಪ್ರವೇಶಿಸದಂತೆ ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಜೊತೆಗೆ ಈ ದೇಗುಲಗಳಿಗೆ ಟ್ರಸ್ಟ್ ಸ್ಟಾಪಿಸಿ ದೇವಾಲಯ ಸಂಕೀರ್ಣದ ನಿರ್ವಹಣೆ ಮತ್ತು ಆಡಳಿತವನ್ನು ಟ್ರಸ್ಟ್ ಗೆ ವರ್ಗಾಯಿಸುವಂತೆ ಮನವಿಯಲ್ಲಿ ಕೋರಲಾಗಿದೆ.

ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶೆ ನೇಹಾ ಶರ್ಮಾ, ಡಿ.24ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.












Click it and Unblock the Notifications