ದೆಹಲಿಯ ಇಂಡಿಯಾ ಗೇಟ್ ಬಳಿ ಇಂಥದೊಂದು ಸ್ಮಾರಕವೇ
ದೆಹಲಿ, ನವೆಂಬರ್.07: ಇದೊಂದು ಹೆಸರು ಭಾರತದಲ್ಲಿ ಆಳ್ವಿಕೆ ನಡೆಸಿದ ಬ್ರಿಟೀಷರ ಎದೆಯಲ್ಲೂ ನಡುಕ ಹುಟ್ಟಿಸುತ್ತಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರಲ್ಲಿ ಈ ಹೆಸರು ಅಗ್ರಸ್ಥಾನದಲ್ಲಿತ್ತು. ಮಹಾತ್ಮ ಗಾಂಧೀಜಿ ಶಾಂತಿ ಮಂತ್ರ ಜಪಿಸುತ್ತಾ ಹೋರಾಡುತ್ತಿದ್ದರು. ಆದರೆ, ಈ ಹೋರಾಟಗಾರನ ಹೋರಾಟದ ಪರಿ ಬ್ರಿಟಿಷರನ್ನೇ ಬೆಚ್ಚಿ ಬೀಳಿಸುವಂತಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಎಂಬ ಒಂದೇ ಒಂದು ಹೆಸರು ದೇಶವನ್ನು ಕಿತ್ತು ತಿನ್ನುತ್ತಿದ್ದ ಬ್ರಿಟೀಷರನ್ನೇ ನಡುಗಿಸುತ್ತಿತ್ತು.
ಇಂಥ ಕ್ರಾಂತಿಕಾರಿ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರ ಪ್ರತಿಮೆ ನಿರ್ಮಾಣಕ್ಕೆ ಇದೀಗ ಕಾಲ ಕೂಡಿ ಬಂದಿದೆ. ದೆಹಲಿಯ ಇಂಡಿಯಾ ಗೇಟ್ ಬಳಿ ನೇತಾಜಿ ಪ್ರತಿಮೆ ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸುಭಾಷ್ ಚಂದ್ರ ಬೋಸ್ ರಕ್ತ ಸಂಬಂಧಿ ಹಾಗೂ ಬಿಜೆಪಿ ನಾಯಕರೂ ಆಗಿರುವ ಚಂದ್ರಕುಮಾರ್ ಬೋಸ್ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ನೇತಾಜಿ ಸ್ಮರಣೆ, ಅಂಡಮಾನ್ ನ ಮೂರು ದ್ವೀಪಕ್ಕೆ ಮರು ನಾಮಕರಣ
ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಮಾರ್ಗದಲ್ಲಿ ಹೋರಾಡಿದ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆಯನ್ನು ಸಾರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಅವರ ಮನವಿ ಮಾಡಿದ್ದಾರೆ.
ದೆಹಲಿಯ ರಾಜಪಥ್ ನಲ್ಲಿ ಐಎನ್ ಎ ಮೆಮೋರಿಯಲ್ ನಿರ್ಮಾಣ
ಇಂಡಿಯಾ ಗೇಟ್ ಬಳಿ ನೇತಾಜಿ ಪ್ರತಿಮೆ ಹಾಗೂ ದೆಹಲಿಯ ರಾಜಪಥ್ ನಲ್ಲಿ ಭಾರತದ ರಾಷ್ಟ್ರೀಯ ಸೇನೆಯ ಮೆಮೋರಿಯಲ್ ಸ್ಥಾಪಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನೇತಾಜಿ ಸಂಬಂಧಿ ಚಂದ್ರಕುಮಾರ್ ಬೋಸ್ ಅಭಿಪ್ರಾಯ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುಭಾಷ್ ಚಂದ್ರ ಬೋಸ್ ರ ಪಾತ್ರ. ಅವರು ಅಳವಡಿಸಿಕೊಂಡಿದ್ದ ತತ್ವ ಸಿದ್ದಾಂತಗಳ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ನೇತಾಜಿಯವರ ಪ್ರತಿಮೆ ಹಾಗೂ ಮೆಮೋರಿಯಲ್ ನಿರ್ಮಾಣ ಅಗತ್ಯವಾಗಿದೆ ಎಂದು ಚಂದ್ರಕುಮಾರ್ ಬೋಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
64 ಗೌಪ್ಯ ದಾಖಲೆಗಳನ್ನು ಬಿಡುಗಡೆಗೊಳಿಸಿದ ದೀದಿ
1897ರ ಜನವರಿ 23ರಂದು ಒಡಿಶಾದ ಕಟಕ್ ನಲ್ಲಿ ಸುಭಾಷ್ ಚಂದ್ರ ಬೋಸ್ ಜನಿಸಿದರು. ಭಾರತದ ಸ್ವಾಂತತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೇತಾಜಿ, ಭಾರತ ರಾಷ್ಟ್ರೀಯ ಸೇನೆ ಮೂಲಕ ಹೋರಾಟ ನಡೆಸಿದ್ದರು. ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಪಶ್ಚಿಮ ಬಂಗಾಳ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇತಾಜಿ ಸೇವೆ ಸಲ್ಲಿಸಿದ್ದರು. ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರ ಮೇಲೆ ದಾಳಿ ನಡೆಸಲು ಸೋವಿಯತ್ ರಾಷ್ಟ್ರಗಳನ್ನು ಸುತ್ತಿದ್ದರು. ರಷ್ಯಾ, ಜಪಾನ್ ರಾಷ್ಟ್ರಗಳ ಬೆಂಬಲ ಪಡೆದು ದಾಳಿಗೆ ತಂತ್ರಗಾರಿಕೆ ಹೆಣೆದಿದ್ದರು. ನಂತರ 1945ರ ಆಗಸ್ಟ್, 18ರಂದು ತೈವಾನ್ ವಿಮಾನ ದುರಂತದಲ್ಲಿ ಪ್ರಾಣ ಬಿಟ್ಟರು ಎಂದು ಹೇಳಲಾಗುತ್ತಿದೆ. ಆದರೆ, ಅಂದಿನ ವಿಮಾನ ದುರಂತದಲ್ಲಿ ನೇತಾಜಿ ಬಚಾವ್ ಆಗಿದ್ದು, ಸೋವಿಯತ್ ರಾಷ್ಟ್ರಗಳಿಗೆ ತೆರಳಿದ್ದರು ಅಂತಲೂ ಹೇಳಲಾಗುತ್ತಿದೆ. ಸುಭಾಷ್ ಚಂದ್ರ ಬೋಸ್ ರ ಸಾವಿನ ಕುರಿತು ಮಾಹಿತಿ ಇಂದಿಗೂ ಗೊಂದಲಮಯವಾಗಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ರ ಸಾವಿನ ವಿಚಾರ ಇಂದಿಗೂ ಗೌಪ್ಯವಾಗಿಯೇ ಉಳಿದಿದೆ. ಇದರ ಮಧ್ಯೆ ಕಳೆದ 2015 ಸೆಪ್ಟಂಬರ್ ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ದಾಖಲೆಗಳನ್ನು ತೆರೆದಿಟ್ಟಿದ್ದರು. ನೇತಾಜಿಗೆ ಸಂಬಂಧಿಸಿದ 64 ಗೌಪ್ಯ ಮಾಹಿತಿಯ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದರು.
100 ಪ್ರತಿಗಳನ್ನು ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ
ಪಶ್ಚಿಮ ಬಂಗಾಳ ಸರ್ಕಾರ ನೇತಾಜಿಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ಬಿಡುಗಡೆಗೊಳಿಸಿತು. ಅದಾಗಿ ಐದು ತಿಂಗಳಿಗೆ ಅಂದರೆ 2016ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತಾಜಿಗೆ ಸಂಬಂಧಿಸಿದ 100 ದಾಖಲೆಗಳನ್ನು ಡಿಜಿಟಲ್ ಗೊಳಿಸಿ ಬಿಡುಗಡೆ ಮಾಡಿದರು. ಆ ಮೂಲಕ ನೇತಾಜಿಯವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೋರಿದ ಎದೆಗಾರಿಕೆ, ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪರಿಯನ್ನು ಭಾರತೀಯರಿಗೆ ಪರಿಚಯಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿತು.