ನನ್ನ ಮೇಲೆ ಆರೋಪ ಮಾಡಲು ಬಿಜೆಪಿ ಅಣ್ಣ ಹಜಾರೆಯನ್ನು ಶಸ್ತ್ರವಾಗಿ ಬಳಸಿಕೊಳ್ಳುತ್ತಿದೆ: ಕೇಜ್ರಿವಾಲ್
ನವದೆಹಲಿ, ಆಗಸ್ಟ್ 30: ಮದ್ಯ ನೀತಿ ಹಗರಣದ ಆರೋಪಕ್ಕೆ ಸಂಬಂಧಪಟ್ಟಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಅಣ್ಣಾ ಹಜಾರೆ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್, ಬಿಜೆಪಿ ಆಪ್ ವಿರುದ್ಧ ಅಣ್ಣಾ ಹಜಾರೆಯವರನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧದ ತನಿಖೆಯಲ್ಲಿ ಸಿಬಿಐಗೆ ಯಾವ ಸಾಕ್ಷಿಯೂ ಸಿಗದ ಕಾರಣ, ಬಿಜೆಪಿ ಈಗ ಅಣ್ಣಾ ಹಜಾರೆ ಮೊರೆ ಹೋಗಿದೆ ಎಂದು ಹೇಳಿದ್ದಾರೆ.
ಮನೀಶ್ ಸಿಸೋಡಿಯಾಗೆ ಸಿಬಿಐ ಅನೌಪಚಾರಿಕ ಕ್ಲೀನ್ ಚಿಟ್ ನೀಡಿದೆ, ಆದರೆ ರಾಜಕೀಯ ಒತ್ತಡದ ಅಡಿಯಲ್ಲಿ ಒಂದು ವಾರ ಅಥವಾ 10 ದಿನಗಳಲ್ಲಿ ಅವರನ್ನು ಬಂಧಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅಧಿಕಾರ ಪ್ರೇರಿತ ಅಮಲು ಆಮ್ ಆದ್ಮಿ ಪಕ್ಷದ (ಎಎಪಿ) ರಚನೆಗೆ ಕಾರಣವಾದ ಆಂದೋಲನದ ಸಿದ್ಧಾಂತ ಮತ್ತು ಆದರ್ಶಗಳಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ವಿಮುಖರಾಗುವಂತೆ ಮಾಡಿದೆ ಎಂದು ದೆಹಲಿ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ವಾಗ್ದಾಳಿ ನಡೆಸಿದ್ದರು.

ಅಣ್ಣಾ ಹಜಾರೆಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ
ಬಿಜೆಪಿಯವರು ಮದ್ಯ ನೀತಿಯಲ್ಲಿ ಹಗರಣವಿದೆ ಎಂದು ಹೇಳುತ್ತಿದ್ದಾರೆ ಆದರೆ ಯಾವುದೇ ಹಗರಣವಿಲ್ಲ ಎಂದು ಸಿಬಿಐ ಹೇಳಿದೆ. ಸಾರ್ವಜನಿಕರು ಬಿಜೆಪಿಯವರ ಮಾತನ್ನು ಕೇಳುತ್ತಿಲ್ಲ. ಅಣ್ಣಾ ಹಜಾರೆಯನ್ನು ನೆಪವಾಗಿ ಬಳಸಿಕೊಂಡು ನನ್ನ ಮೇಲೆ ರಾಜಕೀಯ ಆರೋಪಕ್ಕೆ ಮುಂದಾಗಿದ್ದಾರೆ. ಇದೆಲ್ಲಾ ಈಗ ಸಾಮಾನ್ಯವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಹಗರಣ ನಡೆದಿಲ್ಲ ಎಂದು ತಿಳಿಯುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ಜನರ ದಿಕ್ಕು ತಪ್ಪಿಸಲು ಹಜಾರೆಯವರನ್ನು ಅಸ್ತ್ರದಂತೆ ಬಳಸುತ್ತಿದೆ ಎಂದು ಹೇಳಿದ್ದಾರೆ.

ಸಿಸೋಡಿಯಾ ಹಠಕ್ಕೆ ಕೇಜ್ರಿವಾಲ್ ಶ್ಲಾಘನೆ
ತನಿಖಾ ಸಂಸ್ಥೆಗಳು ನಿರಂತರವಾಗಿ ದಾಳಿ ಮಾಡಿದರೂ ಯಾವುದಕ್ಕೂ ಜಗ್ಗದ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದರು.
"ನಾವು ಸಾರ್ವಜನಿಕ ಜೀವನಕ್ಕೆ ಬಂದಾಗ, ನಾವು ಯಾವುದೇ ತನಿಖೆಗೆ ಯಾವಾಗಲೂ ಸಿದ್ಧರಾಗಿರಬೇಕು. ಸಿಬಿಐ ತನ್ನ ಎಲ್ಲಾ ತನಿಖೆಯನ್ನು ಪೂರ್ಣಗೊಳಿಸಿತು. ಮನೀಶ್ ಸಿಸೋಡಿಯಾ ಅವರನ್ನು 14 ಗಂಟೆಗಳ ಕಾಲ ತನಿಖೆ ನಡೆಸಿತು. ಸಿಬಿಐ ಪ್ರಶ್ನೆಗಳಿಗೆ ಸಿಸೋಡಿಯಾ ಉತ್ತರ ನೀಡಿದ್ದಾರೆ. ಅವರ ಬ್ಯಾಂಕ್ ಲಾಕರ್ನಲ್ಲಿ ಅವರಿಗೆ ಏನೂ ಸಿಗಲಿಲ್ಲ. ಆದ್ದರಿಂದ ಅವರಿಗೆ ಅನೌಪಚಾರಿಕ ಕ್ಲೀನ್ ಚಿಟ್ ನೀಡಲಾಗಿದೆ," ಎಂದು ಕೇಜ್ರಿವಾಲ್ ಹೇಳಿದರು.

ಬಿಜೆಪಿ ವಿರುದ್ಧ ತನಿಖೆಗೆ ಕೇಜ್ರಿವಾಲ್ ಆಗ್ರಹ
ಬಿಜೆಪಿ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅರವಿಂದ್ ಕೇಜ್ರಿವಾಲ್, ಈಗ ಸಿಬಿಐ ತನಿಖೆಯಿಂದ ಅವರಿಗೆ ಏನೂ ಸಿಗಲಿಲ್ಲ, ಇದರಲ್ಲಿ ರಾಜಕೀಯ ಬೇಡ, ದೆಹಲಿಯಲ್ಲಿ 20 ಕೋಟಿ ರುಪಾಯಿ ನೀಡಿ ಶಾಸಕರನ್ನು ಖರೀದಿಸಲು ಹೇಗೆ ಬಯಸಿದ್ದರು ಎಂಬ ಬಗ್ಗೆ ತನಿಖೆಯಾಗಬೇಕು. ಅಷ್ಟೊಂದು ಹಣ ಬಿಜೆಪಿಗೆ ಎಲ್ಲಿ ಬರುತ್ತದೆ ಎನ್ನುವುದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ದೆಹಲಿಯಲ್ಲಿ ಆಪ್ ಶಾಸಕರನ್ನು ಖರೀದಿ ಮಾಡಲು ಬಿಜೆಪಿ 20 ಕೋಟಿ ರುಪಾಯಿ ಆಮಿಷವನ್ನು ಒಡ್ಡಿದೆ. 40 ಶಾಸಕರ ಖರೀದಿಗೆ 800 ಕೋಟಿ ರುಪಾಯಿ ಬೇಕಾಗುತ್ತದೆ ಬಿಜೆಪಿ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಆಪ್ ಆರೋಪ ಮಾಡಿತ್ತು.

ಕೇಜ್ರಿವಾಲ್ರನ್ನು ಟೀಕಿಸಿದ್ದ ಅಣ್ಣಾಹಜಾರೆ
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಪತ್ರ ಬರೆದು ಕೇಜ್ರಿವಾಲ್ ಅಧಿಕಾರದ ಅಮಲಿನಲ್ಲಿದ್ದಾರೆ ಮತ್ತು ಎಎಪಿ ರಚಿಸಿದ ಚಳವಳಿಯ ಸಿದ್ಧಾಂತ ಮತ್ತು ಮೌಲ್ಯಗಳನ್ನು ಮರೆತಿದೆ ಎಂದು ಆರೋಪಿಸಿದರು.
ದೆಹಲಿಯ ಹೊಸ ಅಬಕಾರಿ ನೀತಿಯ ವಿರುದ್ಧವೂ ಅಣ್ಣಾ ಹಜಾರೆ ಟೀಕೆ ಮಾಡಿದ್ದು. ಇದು ಮದ್ಯದ ಮಾರಾಟ ಮತ್ತು ಸೇವನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. "ನಗರದ ಮೂಲೆ ಮೂಲೆಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲಾಗುತ್ತಿದೆ ಮತ್ತು ಇದು ಸಾರ್ವಜನಿಕರ ಹಿತದೃಷ್ಟಿಯಿಂದ ತುಂಬಾ ಕೆಟ್ಟದಾಗಿದೆ." ಎಂದು ಟೀಕಿಸಿದ್ದಾರೆ.












Click it and Unblock the Notifications