Breaking: "ಶಾಸಕರ ಖರೀದಿಗೆ 5500 ಕೋಟಿ ಖರ್ಚು ಮಾಡಿದ ಬಿಜೆಪಿ"
ನವದೆಹಲಿ, ಆಗಸ್ಟ್ 26: ಭಾರತೀಯ ಜನತಾ ಪಕ್ಷವು ಸಾರ್ವಜನಿಕರ ತೆರಿಗೆ ಹಣವನ್ನು ಶಾಸಕರ ಖರೀದಿಗಾಗಿ ಬಳಸಿಕೊಳ್ಳುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೇಶದಲ್ಲಿ 277 ಶಾಸಕರನ್ನು ಭಾರತೀಯ ಜನತಾ ಪಕ್ಷದವರು ತಮ್ಮ ಕಡೆಗೆ ಸೆಳೆದುಕೊಂಡಿದ್ದಾರೆ ಎಂಬುದು ನಮ್ಮ ಲೆಕ್ಕಾಚಾರದಿಂದ ಗೊತ್ತಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ದೂಷಿಸಿದ್ದಾರೆ.
2022ರಲ್ಲಿ ಕಾಂಗ್ರೆಸ್ ತೊರೆದ ಹಿರಿಯ ನಾಯಕರ ಪಟ್ಟಿ ಇಲ್ಲಿದೆ
ಭಾರತೀಯ ಜನತಾ ಪಕ್ಷದವರು ಪ್ರತಿಯೊಬ್ಬ ಶಾಸಕರಿಗೆ 20 ಕೋಟಿ ರೂಪಾಯಿ ಹಣವನ್ನು ನೀಡುತ್ತಿದ್ದಾರೆ. ಇದುವರೆಗೂ 5500 ಕೋಟಿ ರೂಪಾಯಿ ಹಣವನ್ನು ಕೇವಲ ಶಾಸಕರ ಖರೀದಿಗಾಗಿ ಬಳಸಿಕೊಂಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಭಾರತದಲ್ಲಿ ಹಣದುಬ್ಬರಕ್ಕೆ ಏನು ಕಾರಣ?:
ಭಾರತದಲ್ಲಿ ಈಗ ಹಣದುಬ್ಬರ ಸೃಷ್ಟಿಯಾಗುವುದಕ್ಕೆ ಬಿಜೆಪಿಯವರೇ ಮುಖ್ಯ ಕಾರಣವಾಗಿದ್ದಾರೆ. ಸಾರ್ವಜನಿಕರು ನೀಡುವ ತೆರಿಗೆ ಹಣವನ್ನೆಲ್ಲ ಇವರು ಶಾಸಕರ ಖರೀದಿಗೆ ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿಯೇ ದೇಶದಲ್ಲಿ ಹಣದುಬ್ಬರ ಸೃಷ್ಟಿಯಾಗುತ್ತಿದೆ ಎಂದು ಕೇಜ್ರಿವಾಲ್ ಕಿಡಿ ಕಾರಿದ್ದಾರೆ.
"ಆಪರೇಷನ್ ಕಮಲ" ಬಗ್ಗೆ ಚರ್ಚಿಸಲು ಅಧಿವೇಶನ:
ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ದೆಹಲಿಯಲ್ಲಿ ಬಿಜೆಪಿಯ "ಆಪರೇಷನ್ ಕಮಲ" ಬಗ್ಗೆ ಚರ್ಚಿಸಲು ಅಧಿವೇಶನವನ್ನು ಕರೆದಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಉರುಳಿಸಲು ಬಿಜೆಪಿ 40 ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ. ಶಾಸಕರನ್ನು ಬದಲಾಯಿಸಲು ಬಿಜೆಪಿ ₹ 20 ಕೋಟಿ ಆಫರ್ ಮಾಡಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಶಾಸಕರನ್ನು ಖರೀದಿಸಲು ಬಿಜೆಪಿ ಬಳಿ ಇಷ್ಟೊಂದು ಹಣ ಹೇಗೆ ಇದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.