ದೆಹಲಿ ಶಾಂತಿ ಮೆರವಣಿಗೆಯಲ್ಲಿ ಬಿಜೆಪಿ ಶಾಸಕ ಕಪಿಲ್ ಮಿಶ್ರಾ ಪ್ರತ್ಯಕ್ಷ
ನವದೆಹಲಿ, ಫೆಬ್ರವರಿ.29: ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಮರುಸ್ಥಾಪಿಸುವ ಉದ್ದೇಶದಿಂದ ನಡೆಸಿದ ಜಂತರ್ ಮಂತರ್ ನಲ್ಲಿ ನಡೆಸಿದ ಶಾಂತಿ ಮೆರವಣಿಗೆಯಲ್ಲಿ ಬಿಜೆಪಿ ಶಾಸಕ ಕಪಿಲ್ ಮಿಶ್ರಾ ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ.
ಕಳೆದ ಫೆಬ್ರವರಿ.24ರಂದು ಜಫ್ರಾಬಾದ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರದೇಶಕ್ಕೆ ತೆರಳಿದ ಶಾಸಕ ಕಪಿಲ್ ಮಿಶ್ರಾ, 24 ಗಂಟೆಗಳಲ್ಲಿ ರಸ್ತೆಯಲ್ಲಿ ಪ್ರತಿಭಟನೆಯನ್ನು ನಿಲ್ಲಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎನ್ನುವ ಮೂಲಕ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದರು.
ದೆಹಲಿ ಹಿಂಸಾಚಾರಕ್ಕೆ ಪ್ರಚೋದಿಸಿದವರ ವಿರುದ್ಧವೇಕಿಲ್ಲ ಎಫ್ಐಆರ್?
ಕಪಿಲ್ ಮಿಶ್ರಾ ಈ ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲೇ ಆರಂಭವಾದ ಹಿಂಸಾಚಾರಕ್ಕೆ ಇಡೀ ರಾಷ್ಟ್ರ ರಾಜಧಾನಿಯೇ ಹೊತ್ತಿ ಉರಿಯಿತು. ದೆಹಲಿ ಹಿಂಸಾಚಾರದಲ್ಲಿ ಇದುವರೆಗೂ 42 ಮಂದಿ ಪ್ರಾಣ ಬಿಟ್ಟಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದೆಹಲಿ ಹಿಂಸಾಚಾರ ಪ್ರಚೋದಕರ ವಿರುದ್ಧ ಕ್ರಮಕ್ಕೆ ಒತ್ತಾಯ:
ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 123 ಪ್ರಕರಣ ದಾಖಲಿಸಿಕೊಂಡಿರುವ ತನಿಖಾಧಿಕಾರಿಗಳು ಕನಿಷ್ಠ 630 ಜನರನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಪ್ರಚೋದನಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಆಪ್ ಮುಖಂಡ ಸಂಜಯ್ ಸಿಂಗ್ ಪ್ರಶ್ನಿಸಿದ್ದರು. ಜನರನ್ನು ಹಿಂಸೆಗೆ ಪ್ರೇರೇಪಿಸಿದವರ ವಿರುದ್ಧ ಎಸ್ಐಟಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಎಫ್ಐಆರ್ ನಲ್ಲಿ ತಪ್ಪಿತಸ್ಥರ ಹೆಸರನ್ನೂ ಸಹ ಸೇರಿಸಬೇಕು ಎಂದು ಸಂಜಯ್ ಸಿಂಗ್ ಆಗ್ರಹಿಸಿದ್ದರು.
ಮೂವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದ ಕೋರ್ಟ್:
ಇನ್ನು, ದೆಹಲಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವಂತಾ ಹೇಳಿಕೆ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಶಾಸಕ ಕಪಿಲ್ ಮಿಶ್ರಾ ಮತ್ತು ಬಿಜೆಪಿ ಮುಖಂಡ ಪರ್ವೇಜ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹೈಕೋರ್ಟ್ ಕೂಡಾ ಸೂಚನೆ ನೀಡಿತ್ತು. 1984ರಲ್ಲಿ ನಡೆದ ಸಿಖ್ ದಂಗೆಯಂತಾ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಹೈಕೋರ್ಟ್ ಬುಧವಾರ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿತ್ತು.