ಕಿರಣ್ ಬೇಡಿ ದೆಹಲಿ ಸಿಎಂ ಅಭ್ಯರ್ಥಿ : ಅಧಿಕೃತ ಘೋಷಣೆ
ನವದೆಹಲಿ, ಜ.20 : ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿ ಸೇರಿರುವ ಬಗ್ಗೆ ಅಸಮಾಧಾನಗಳು ಇರುವ ಹೊತ್ತಿನಲ್ಲೇ ಅವರನ್ನು ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಕೃಷ್ಣಾನಗರ ಕ್ಷೇತ್ರದಿಂದ ಕಿರಣ್ ಬೇಡಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಸೋಮವಾರ ರಾತ್ರಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಪಕ್ಷದ ಸಂಸದೀಯ ಮತ್ತು ಚುನಾವಣಾ ಸಮಿತಿ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಾಗಿದ್ದು, ಸಭೆಯ ಬಳಿಕ ಅಮಿತ್ ಶಾ ಈ ವಿಚಾರವನ್ನು ಪ್ರಕಟಿಸಿದ್ದಾರೆ. [ಕಿರಣ್ ಬೇಡಿ ಕುರಿತ ಕುತೂಹಲಕಾರಿ ವಿಷಯಗಳು]

ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ ಅವರು, ಕಿರಣ್ ಬೇಡಿ ಅವರ ನೇತೃತ್ವದಲ್ಲಿ ಪಕ್ಷವು ಚುನಾವಣೆ ಎದುರಿಸಲಿದೆ. ಅವರೇ ಪಕ್ಷದ ಸಿಎಂ ಅಭ್ಯರ್ಥಿ. ಕೃಷ್ಣಾನಗರ ಕ್ಷೇತ್ರದಿಂದ ಕಿರಣ್ ಬೇಡಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು. [ಬಿಜೆಪಿ ಸೇರಿದ ಕಿರಣ್ ಬೇಡಿ ಅವರಿಗೆ ಬಹಿರಂಗ ಪತ್ರ!]
ಕಿರಣ್ ಬೇಡಿ ಅವರು ಪಕ್ಷ ಸೇರಿದ ನಾಲ್ಕು ದಿನಗಳಲ್ಲಿ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಕಿರಣ್ ಬೇಡಿ ಬಿಜೆಪಿ ಸೇರಿರುವ ಬಗ್ಗೆ ಪಕ್ಷದ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ರಾಷ್ಟ್ರೀಯ ನಾಯಕರು ಇಂತಹ ವರ್ತನೆ ಪ್ರದರ್ಶಿಸದಂತೆ ಸೂಚನೆ ನೀಡಿದ್ದರು. [ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಕಿರಣ್ ಬೇಡಿ]
ಲೆಕ್ಕಾಚಾರಗಳೇನು : ಕಿರಣ್ ಬೇಡಿ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ ಬಿಜೆಪಿ ಹಲವಾರು ಲೆಕ್ಕಾಚಾರಗಳನ್ನು ಹೊಂದಿದೆ. ದೆಹಲಿಯಲ್ಲಿ ಸಾಕಷ್ಟು ಸಿಖ್ ಮತಗಳಿವೆ, ಬೇಡಿ ದೆಹಲಿಯಲ್ಲಿ ಹಿಂದೆ ಪೊಲೀಸ್ ಅಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅಣ್ಣಾ ಹಜಾರೆ ಹೋರಾಟದ ವೇಳೆ ಮುಂಚೂಣಿಯಲ್ಲಿದ್ದರು. ಆದ್ದರಿಂದ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕಿರಣ್ ಬೇಡಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವುದರಿಂದ ದೆಹಲಿ ಚುನಾವಣೆ ಅರವಿಂದ್ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ನಡುವಿನ ಹೋರಾಟವಾಗಿ ಬದಲಾಗಿದೆ. ಫೆಬ್ರವರಿ 7ರಂದು ದೆಹಲಿಯಲ್ಲಿ ಮತದಾನ ನಡೆಯಲಿದ್ದು, ಫೆ.10ರಂದು ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications