ಕೇರಳ, ಪಶ್ಚಿಮ ಬಂಗಾಳದ ಕಡೆ ಗಮನ ಕೊಡಿ: ಮುಖಂಡರಿಗೆ ಅಮಿತ್ ಶಾ ಸೂಚನೆ
ನವದೆಹಲಿ, ಜೂನ್ 14: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದರೂ ಕೆಲವು ರಾಜ್ಯಗಳಲ್ಲಿನ ಪಕ್ಷದ ಸಾಧನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಮಾಧಾನ ತಂದಿಲ್ಲ. ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಪಕ್ಷದ ಸಂಘಟನಾತ್ಮಕ ಕೆಲಸವನ್ನು ವಿಸ್ತರಣೆ ಮಾಡುವಂತೆ ಅಮಿತ್ ಶಾ ಪಕ್ಷದ ಸಂಘಟಕರಿಗೆ ಸೂಚನೆ ನೀಡಿದ್ದಾರೆ.
ಪಕ್ಷದ ಸಂಘಟನಾ ನಾಯಕರು, ರಾಜ್ಯ ಘಟಕದ ಮುಖ್ಯಸ್ಥರು ಮತ್ತು ಪ್ರಭಾರಿಗಳೊಂದಿಗೆ ಸಭೆ ನಡೆಸಿದ ಅವರು, ಪಕ್ಷದ ಸಂಘಟನಾ ಚುನಾವಣೆ ನಡೆಸುವ ಮುನ್ನ ಹೊಸ ಸದಸ್ಯತ್ವ ನೋಂದಣಿ ಕಾರ್ಯವನ್ನು ಚುರುಕುಗೊಳಿಸುವಂತೆ ಸಲಹೆ ನೀಡಿದರು.
ಕಳೆದ ಐದು ವರ್ಷಗಳಲ್ಲಿ ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣಗಳಂತಹ ರಾಜ್ಯಗಳಲ್ಲಿ ಬಿಜೆಪಿ ಸ್ವತಃ ಬಲಗೊಂಡಿದೆ. 2014ರಲ್ಲಿ ಉತ್ತಮ ಫಲಿತಾಂಶ ನೀಡಿದ್ದ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಇದೇ ರೀತಿ ಮುಂದಿನ ವರ್ಷಗಳಲ್ಲಿ ಹೊಸ ರಾಜ್ಯಗಳಲ್ಲಿಯೂ ಪಕ್ಷವನ್ನು ವಿಸ್ತರಿಸಬೇಕು ಎಂದರು.

ಪ್ರಸ್ತುತ ಪಕ್ಷದಲ್ಲಿ 11 ಕೋಟಿ ಸದಸ್ಯರಿದ್ದು, ಪ್ರಸ್ತುತ ಅದನ್ನು ಶೇ 20ರಷ್ಟು ಹೆಚ್ಚಿಸುವ ಗುರಿ ನೀಡಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications