ದೆಹಲಿ ವ್ಯಾಪಾರಿ ಬಲೆಗೆ, ಎರಡು ವರ್ಷದಲ್ಲಿ ಟನ್ ಗಟ್ಟಲೆ ಚಿನ್ನ ಕಳ್ಳಸಾಗಣೆ
ನವದೆಹಲಿ, ಮೇ 22: ಚಿನ್ನ ಕಳ್ಳಸಾಗಣೆ ಜಾಲದಲ್ಲೇ ಅತಿ ದೊಡ್ಡದು ಎನ್ನಬಹುದಾದ್ದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು ಬಯಲು ಮಾಡಿದೆ. ಈ ಜಾಲವನ್ನು ದೆಹಲಿ ಮೂಲದ ವ್ಯಾಪಾರಿ ನಡೆಸುತ್ತಿದ್ದಾನೆ ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಈತ ದುಬೈನಿಂದ ಎರಡು ಟನ್ ಅಂದರೆ ಎರಡು ಸಾವಿರ ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿರುವ ಸಾಧ್ಯತೆ ಇದೆ.
ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಹದಿನೈದು ಕೋಟಿ ಮೌಲ್ಯದ ಐವತ್ತೆರಡು ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಗುಜರಾತ್ ನ ಮುಂದ್ರಾ ಬಂದರಿನಲ್ಲಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಈ ಜಾಲದ ಸೂತ್ರಧಾರಿ ಹರ್ನೇಕ್ ಸಿಂಗ್ ನನ್ನು ಬಂಧಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತದೊಳಕ್ಕೆ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಇಲಾಖೆ ತಿಳಿಸಿದೆ.
ಮೇ ಹದಿಮೂರರಂದು ನಲವತ್ನಾಲ್ಕು ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಪೌಲ್ಟ್ರಿಗಳಲ್ಲಿ ಬಳಕೆಯಾಗುವ ಇನ್ ಕ್ಯುಬೇಟರ್ಸ್ ನಲ್ಲಿ ಚಿನ್ನವನ್ನು ತುಂಬಿ ಮುಂದ್ರಾ ಬಂದರಿನಿಂದ ದೆಹಲಿಯಲ್ಲಿರುವ ಸಿಂಗ್ ನ ಕಾರ್ಖಾನೆಗೆ ಸಾಗಿಸಲಾಗುತ್ತಿತ್ತು. ದುಬೈನಲ್ಲಿರುವ ಸಿಂಗ್ ನ ಭಾವಮೈದುನನ ಜತೆ ಸೇರಿ ಈ ದಂಧೆ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಲಾ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ. ದುಬೈನಲ್ಲಿರುವ ಭಾವಮೈದುನ ಸರಕು ಕಳಿಸುತ್ತಿದ್ದ. ಇನ್ ಕ್ಯುಬೇಟರ್ ಗಳಲ್ಲಿ ಐವತ್ತು ಕೆಜಿ ಚಿನ್ನದ ಗಟ್ಟಿಯನ್ನು ಮುಚ್ಚಿಟ್ಟು ಕಳಿಸುತ್ತಿದ್ದ. ಲೋಹ ತಗುಲಿ ಶಬ್ದ ಬರದಂತೆ ಅವುಗಳಿಗೆ ದಪ್ಪದಾದ ಪೇಪರ್ ಗಳನ್ನು ಮುಚ್ಚಿರಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
{promotion-urls}