ಅಯೋಧ್ಯೆ ವಿವಾದ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ನವದೆಹಲಿ, ನವೆಂಬರ್ 12: ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಪ್ರಕರಣವನ್ನು ತ್ವರಿತವಾಗಿ ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಸಂಬಂಧಿತ ನ್ಯಾಯಪೀಠದಲ್ಲಿ ಜನವರಿಯಲ್ಲಿ ನಡೆಸಲು ಈಗಾಗಲೇ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಎಸ್ ಕೆ ಕೌಲ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.
ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಬೆಂಗಳೂರಲ್ಲಿ ವಿಎಚ್ಪಿ ರ್ಯಾಲಿ
'ನಾವು ಈಗಾಗಲೇ ಆದೇಶ ಹೊರಡಿಸಿದ್ದೇವೆ. ಅರ್ಜಿಗಳು ಜನವರಿಯಲ್ಲಿ ವಿಚಾರಣೆಗೆ ಬರಲಿವೆ. ಹೀಗಾಗಿ ಅನುಮತಿ ನಿರಾಕರಿಸಲಾಗಿದೆ' ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ವಕೀಲ ಬರುಣ್ ಕುಮಾರ್ ಸಿನ್ಹಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ಇದಕ್ಕೂ ಮುನ್ನ ಸುಪ್ರೀಂಕೋರ್ಟ್, ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದದ ಪ್ರಕರಣವನ್ನು ಜನವರಿ ಮೊದಲ ವಾರ ಸೂಕ್ತ ನ್ಯಾಯಪೀಠ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿತ್ತು. ಬಳಿಕ ವಿಚಾರಣೆಯ ಅವಧಿಯನ್ನು ನಿರ್ಧರಿಸಲಾಗುವುದು ಎಂದು ತಿಳಿಸಿತ್ತು.
ಮಂದಿರ್ ಥಾ, ಹೈ ಔರ್ ರಹೇಗಾ: ಯೋಗಿಯಿಂದ ರಾಮಮಂದಿರ ನಿರ್ಮಾಣದ ಸೂಚನೆ
ದೀರ್ಘ ಕಾಲದಿಂದ ಈ ವಿವಾದ ಅಸ್ತಿತ್ವದಲ್ಲಿ ಇರುವುದರಿಂದ ಅದರ ತ್ವರಿತ ವಿಚಾರಣೆ ನಡೆಸುವಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ರಾಮ್ ಲಲ್ಲಾ ಪಂಥವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಸಿಎಸ್ ವೈದ್ಯನಾಥನ್ ಮನವಿ ಮಾಡಿದ್ದರು.
ಬೆಂಗಳೂರಲ್ಲೂ ರಾಮಮಂದಿರ ನಿರ್ಮಾಣ: ಆರ್ ಅಶೋಕ್
'ಮಸೀದಿಯು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ' ಎಂದು 1994ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ 2:1ರ ಬಹುಮತದಲ್ಲಿ ನಿರಾಕರಿಸಿತ್ತು.
ಧಾಂಧೂಂ ಅಂತ ರಾಮ ಮಂದಿರದ ನಿರ್ಮಾಣ : ಸಾಧುಸಂತರ ಘೋಷಣೆ
ಇದು ಸಿವಿಲ್ ಪ್ರಕರಣ. ಸಿವಿಲ್ ಪ್ರಕರಣಗಳನ್ನು ಸಾಕ್ಷ್ಯಗಳ ಆಧಾರದ ಮೇಲೆ ವಿಲೇವಾರಿ ಮಾಡಲಾಗುತ್ತದೆ. ಹಿಂದಿನ ತೀರ್ಪು ಈ ಪ್ರಕರಣದಲ್ಲಿ ಪ್ರಸ್ತುತತೆ ಹೊಂದಿಲ್ಲ ಎಂದು ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಹೇಳಿತ್ತು.
ಅಯೋಧ್ಯೆಯ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾ ನಡುವೆ ಹಂಚಿಕೆ ಮಾಡಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ 14 ಅರ್ಜಿಗಳನ್ನು ದಾಖಲಿಸಲಾಗಿವೆ.