ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ, ಇಬ್ಬರ ಬಂಧನ
ನವದೆಹಲಿ, ಆಗಸ್ಟ್ 20 : ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆ.13ರಂದು ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆದಿತ್ತು.
ದೆಹಲಿ ಪೊಲೀಸರು ಧರವೇಶ್ ಶಹಪೂರ ಮತ್ತು ನವೀನ್ ದಲಾಲ್ ಎಂಬ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಉಮರ್ ಖಾಲಿದ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆದ ಮರುದಿನ ಧರವೇಶ್ ಶಹಪೂರ ಫೇಸ್ಬುಕ್ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದರು. ಈ ಗುಂಡಿನ ದಾಳಿ ಸ್ವತಂತ್ರ ದಿನಾಚರಣೆಯ ಉಡುಗೊರೆಯಾಗಿದೆ. ನಾವು ಸಿಖ್ ಕ್ರಾಂತಿ ನಡೆದ ಹಳ್ಳಿಯಲ್ಲಿದ್ದು, ಪೊಲೀಸರಿಗೆ ಶರಣಾಗುತ್ತೇವೆ ಎಂದು ಹೇಳಿದ್ದರು.

ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಶಂಕಿತ ಆರೋಪಿಗಳ ರೇಖಾಚಿತ್ರ ತಯಾರು ಮಾಡಿ ಪೊಲೀಸ್ ಠಾಣೆಗಳಿಗೆ ಕಳುಹಿಸಿದ್ದರು. ಹರ್ಯಾಣ ಮತ್ತು ಪಂಜಾಬ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಶುಕ್ರವಾರ ದೆಹಲಿ ಮತ್ತು ಹರ್ಯಾಣದ 30 ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಹಿಡಿಯಲು ಪ್ರಯತ್ನ ನಡೆಸಿದ್ದರು. ಆದರೆ, ಆರೋಪಿಗಳು ಶರಣಾಗಿರಲಿಲ್ಲ. ಭಾನುವಾರ ತಡರಾತ್ರಿ ಹರ್ಯಾಣದಲ್ಲಿ ಅವರನ್ನು ಬಂಧಿಸಿ ದೆಹಲಿಗೆ ಕರೆದುಕೊಂಡು ಬರಲಾಗಿದೆ.












Click it and Unblock the Notifications