ಪಂಚರಾಜ್ಯ ಚುನಾವಣೆ ಫಲಿತಾಂಶ: ಕಾಂಗ್ರೆಸ್ ನೀರಸ ಪ್ರದರ್ಶನ ಒಪ್ಪಿಕೊಂಡ ರಾಹುಲ್ ಗಾಂಧಿ
ನವದೆಹಲಿ, ಮೇ 3: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೀರಸ ಪ್ರದರ್ಶನವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ.
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಭಾನುವಾರ ಹೊರಬಿದಿದ್ದು, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದೊಂದಿಗಿನ ಮೈತ್ರಿ ಹೊರತುಪಡಿಸಿ ಯಾವುದೇ ರಾಜ್ಯಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ವಿಫಲವಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ ಬಾರಿ ಗೆದ್ದಿದ್ದ ಸ್ಥಾನಗಳನ್ನು ಕಳೆದುಕೊಂಡಿದೆ. ಇನ್ನು ಪುದುಚೇರಿಯಲ್ಲಿ ಅಧಿಕಾರ ಕಳೆದುಕೊಂಡಿದೆ.
ಅದೇ ರೀತಿ ಅಸ್ಸಾಂ ಚುನಾವಣೆಯಲ್ಲಿ ತನ್ನ ಸಂಖ್ಯೆಗಳನ್ನು ವೃದ್ಧಿಸಿಕೊಂಡಿದ್ದು ಬಿಟ್ಟರೆ ಅಧಿಕಾರದ ಬಳಿ ಸುಳಿದಿಲ್ಲ. ಅಲ್ಲಿಯೂ ಮತ್ತೆ ವಿಪಕ್ಷವಾಗಿ ಮುಂಸುವರೆಯಲಿದೆ. ತಮಿಳುನಾಡಿನ ಪ್ರಾದೇಶಿಕ ಪಕ್ಷ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಸ್ತುತ ಮತಗಳ ಸಂಖ್ಯೆಯಲ್ಲಿ ಮುನ್ನಡೆ ಸಾಧಿಸಿದೆ.

ಒಟ್ಟಾರೆ ಪಂಚರಾಜ್ಯಗಳಲ್ಲಿ ಹೀನಾಯ ಸೋಲನ್ನು ಒಪ್ಪಿಕೊಂಡ ರಾಹುಲ್ ಗಾಂಧಿ, "ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ. ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮತ್ತು ನಮ್ಮನ್ನು ಬೆಂಬಲಿಸಿದ ಈ ನೆಲದ ಲಕ್ಷಾಂತರ ಮತದಾರರಿಗೆ ಪ್ರಾಮಾಣಿಕ ಕೃತಜ್ಞತೆಗಳು. ನಾವು ನಮ್ಮ ಮೌಲ್ಯಗಳು ಮತ್ತು ಆದರ್ಶಗಳಿಗಾಗಿ ಹೋರಾಡುತ್ತೇವೆ. ಜೈ ಹಿಂದ್' ಎಂದು ಟ್ವೀಟ್ ಮಾಡಿದ್ದಾರೆ.
ಇದೇ ತಮಿಳುನಾಡು ಚುನಾವಣೆಯಲ್ಲಿ ತಮ್ಮ ಮೈತ್ರಿ ಪಕ್ಷದ ವಿಜಯಕ್ಕೆ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರನ್ನು ಅಭಿನಂದಿಸಿದರು. ' ಅದ್ಭುತ ವಿಜಯಕ್ಕಾಗಿ ಎಂ.ಕೆ.ಸ್ಟಾಲಿನ್ ಅವರಿಗೆ ಅಭಿನಂದನೆಗಳು. ತಮಿಳುನಾಡಿನ ಜನರು ಬದಲಾವಣೆಗೆ ಮತ ಹಾಕಿದ್ದಾರೆ ಮತ್ತು ನಿಮ್ಮ ನಾಯಕತ್ವದಲ್ಲಿ ನಾವು ಆ ದಿಕ್ಕಿನಲ್ಲಿ ಆತ್ಮವಿಶ್ವಾಸದ ಹೆಜ್ಜೆ ಎಂದು ಸಾಬೀತುಪಡಿಸುತ್ತೇವೆ. ಶುಭಾಶಯಗಳು' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕಾಗಿ ಮಮತಾ ಜೀ ಮತ್ತು ಪಶ್ಚಿಮ ಬಂಗಾಳದ ಜನರನ್ನು ಅಭಿನಂದಿಸಲು ನನಗೆ ಸಂತೋಷವಾಗಿದೆ ಎಂದೂ ಟ್ವೀಟ್ ಮಾಡಿದ್ದಾರೆ.












Click it and Unblock the Notifications