ಗಡ್ಕರಿ ಕೇಸ್ : ಅರವಿಂದ್ ಕೇಜ್ರಿವಾಲ್ ಗೆ ಹೊಸ ಸಂಕಷ್ಟ
ನವದೆಹಲಿ, ಜೂ. 6 : ಕೇಂದ್ರ ಸಚಿವ ನಿತೀನ್ ಗಡ್ಕರಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಟಿಯಾಲಾ ನ್ಯಾಯಾಲಯದಲ್ಲಿ ಚಾರ್ಚ್ ಶೀಟ್ ದಾಖಲಾಗಿದೆ. ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸುವಂತೆ ಕೋರ್ಟ್ ನೀಡಿದ ಸಲಹೆಯನ್ನು ಕೇಜ್ರಿವಾಲ್ ತಿರಸ್ಕರಿಸಿದ್ದಾರೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿರುದ್ಧ ಕೇಜ್ರಿವಾಲ್ ಮಾಡಿದ್ದ ಆರೋಪದ ಕುರಿತ ವಿಚಾರಣೆ ಶುಕ್ರವಾರ ಪಟಿಯಾಲಾ ಕೋರ್ಟ್ ನಲ್ಲಿ ನಡೆಯಿತು. ಗಡ್ಕರಿ ಮತ್ತು ಕೇಜ್ರಿವಾಲ್ ಅವರು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಕೇಜ್ರಿವಾಲ್ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರಡಿ ಚಾರ್ಜ್ಶೀಟ್ ದಾಖಲು ಮಾಡಿಕೊಳ್ಳುವಂತೆ ಕೋರ್ಟ್ ಆದೇಶ ನೀಡಿತು.

ವಿಚಾರಣೆಗೆ ಹಾಜರಾದ ಇಬ್ಬರಿಗೂ ಕೋರ್ಟ್ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿತು. ಆದರೆ, ಅರವಿಂದ್ ಕೇಜ್ರಿವಾಲ್ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದರು. ಗಡ್ಕರಿ ಸಹ ಮೊಕದ್ದಮೆ ಹಿಂಪಡೆಯಲು ನಿರಾಕರಿಸಿದರು. ಆದ್ದರಿಂದ ಚಾರ್ಚ್ ಶೀಟ್ ದಾಖಲು ಮಾಡಲು ಸೂಚನೆ ನೀಡಲಾಯಿತು. [ಕೇಜ್ರಿವಾಲ್ ಗೆ ನ್ಯಾಯಾಂಗ ಬಂಧನ]
ಈ ಪ್ರಕರಣ ಮುಂದಿನ ವಿಚಾರಣೆ ಆಗಸ್ಟ್ 2ಕ್ಕೆ ಮುಂದೂಡಲಾಗಿದೆ. ಮುಂದಿನ ವಿಚಾರಣೆ ವೇಳೆಗೆ ಗಡ್ಕರಿ ವಿರುದ್ಧದ ಆರೋಪಗಳಿಗೆ ಕೇಜ್ರಿವಾಲ್ ಅವರು ದಾಖಲೆಗಳನ್ನು ಒದಗಿಸಿ ಆರೋಪವನ್ನು ಸಾಬೀತು ಮಾಡಬೇಕಾಗುತ್ತದೆ. ಆರೋಪ ಸಾಬೀತಾಗದಿದ್ದರೆ, ಕೇಜ್ರಿವಾಲ್ ಅವರಿಗೆ 2 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ಜೈಲಿಗೆ ಹೋಗಿಬಂದಿದ್ದಾರೆ : ಮೇ 23 ರಂದು ಈ ಪ್ರಕರಣದ ವಿಚಾರಣೆ ನಡೆಯುವಾಗ 10 ಸಾವಿರ ವೈಯಕ್ತಿಕ ಬಾಂಡ್ ನೀಡಿ ಜಾಮೀನು ಪಡೆಯುವಂತೆ ಕೇಜ್ರಿವಾಲ್ ಅವರಿಗೆ ಕೋರ್ಟ್ ಸೂಚನೆ ನೀಡಿದರೂ ಅದನ್ನು ಕೇಜ್ರಿವಾಲ್ ನಿರಾಕರಿಸಿದ್ದು ಇದರಿಂದಾಗಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನಂತರ ಹೈಕೋರ್ಟ್ ಸೂಚನೆ ಹಿನ್ನಲೆಯಲ್ಲಿ ಜಾಮೀನು ಪಡೆದು ಹೊರಬಂದಿದ್ದರು.












Click it and Unblock the Notifications