ಬಿಜೆಪಿಗೆ ಕೇಜ್ರಿವಾಲ್ ಸವಾಲು: ಬುಧವಾರ ಮಧ್ಯಾಹ್ನ 1 ಗಂಟೆಯ ಡೆಡ್ಲೈನ್
ನವದಹೆಲಿ, ಫೆಬ್ರವರಿ 04: ದೆಹಲಿ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಮೂರು ದಿನಗಳು ಬಾಕಿ ಇರುವಂತೆ ಬಿಜೆಪಿ ಗೆ ದೆಹಲಿ ಸಿಎಂ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಸವಾಲು ಹಾಕಿದ್ದಾರೆ. ನಾಳೆ ಮಧ್ಯಾಹ್ನ 1 ಗಂಟೆ ಒಳಗೆ ಸವಾಲು ಪೂರೈಸುವಂತೆ ಹೇಳಿದ್ದಾರೆ.
'ನಾಳೆ (ಬುಧವಾರ) ಮಧ್ಯಾಹ್ವ 1 ಗಂಟೆ ಒಳಗೆ ದೆಹಲಿ ಚುನಾವಣೆಗೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ' ಎಂದು ಅರವಿಂದ ಕೇಜ್ರಿವಾಲ್ ಬಿಜೆಪಿ ಗೆ ಸವಾಲು ಹಾಕಿದ್ದಾರೆ.
'ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಘೊಷಿಸದೆ ಅಮಿತ್ ಶಾ ದೆಹಲಿ ಜನರ ಬಳಿ ಖಾಲಿ ಚೆಕ್ ನೀಡುವಂತೆ ಕೇಳುತ್ತಿದ್ದಾರೆ' ಎಂದು ಕೇಜ್ರಿವಾಲ್ ವ್ಯಂಗ್ಯ ಮಾಡಿದ್ದಾರೆ.
'ದೆಹಲಿಯ ಫಲಿತಾಂಶ ಬಂದ ನಂತರ ಸಿಎಂ ಅನ್ನು ಘೋಷಿಸುತ್ತೇವೆ ಎಂದು ಅಮಿತ್ ಶಾ ಹೇಳುತ್ತಾರೆ. ಒಂದು ವೇಳೆ ಫಲಿತಾಂಶ ಬಂದ ಮೇಲೆ ಯಾರೋ ಅನರ್ಹರನ್ನು ಸಿಎಂ ಮಾಡಿಬಿಟ್ಟರೆ, ಅದು ದೆಹಲಿ ಜನಕ್ಕೆ ಮಾಡಿದ ಮೋಸವೆಂದಾಗುವುದಿಲ್ಲವೇ?' ಎಂದು ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಬಿಜೆಪಿಯು ದೆಹಲಿ ಚುನಾವಣೆ ಗೆಲ್ಲಲು ಭರಪೂರ ಪ್ರಯತ್ನಗಳನ್ನು ಮಾಡುತ್ತಿದೆ. ಮೋದಿ, ಯೋಗಿ ಆದಿತ್ಯನಾಥ, ಅಮಿತ್ ಶಾ ಸೇರಿದಂತೆ ಇನ್ನೂ ಹಲವು ನಾಯಕರು ದೆಹಲಿ ಚುನಾವಣೆಗಾಗಿ ಪ್ರಚಾರ ಮಾಡುತ್ತಿದ್ದಾರೆ. 240 ಸಂಸದರು ಚುನಾವಣೆಗಾಗಿ ರಂಗಕ್ಕೆ ಇಳಿಸಿದೆ ಬಿಜೆಪಿ.
ಬಿಜೆಪಿ-ಎಎಪಿ ನಡುವೆ ನೇರ ಸ್ಪರ್ಧೆ ದೆಹಲಿಯಲ್ಲಿ ಏರ್ಪಟ್ಟಿದೆ. ಕಾಂಗ್ರೆಸ್ ಇದ್ದೂ ಇಲ್ಲದಂತಾಗಿದೆ.