'ಕಾಂಗ್ರೆಸ್ ದು 72 ಸಾವಿರದ ಭರವಸೆ, ಮೋದಿ ಸರಕಾರ 1.06 ಲಕ್ಷ ಕೊಡ್ತಿದೆ'
ನವದೆಹಲಿ, ಮಾರ್ಚ್ 25: ಈ ದೇಶದಲ್ಲಿ ಬಡತನ ಹೆಚ್ಚುವುದಕ್ಕೆ ಕಾರಣವಾದ ದಾಖಲೆ ಹೊಂದಿರುವ ಪಕ್ಷಕ್ಕೆ ಇಂಥ ಉದಾತ್ತವಾದ ಭರವಸೆ ನೀಡುವ ಹಕ್ಕು ಇಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ್ 'ಐತಿಹಾಸಿಕ' ಕನಿಷ್ಠ ಆದಾಯ ಖಾತ್ರಿ ಯೋಜನೆ ಬಗ್ಗೆ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಸೋಮವಾರ ಘೋಷಣೆ ಮಾಡಿ, ಬಡತನದ ವಿರುದ್ಧದ ಕೊನೆ ಯುದ್ಧ ಇದು ಎಂದರು. ಅದಕ್ಕೆ ಉತ್ತರ ನೀಡಿರುವ ಜೇಟ್ಲಿ, ದೇಶದ ಶೇಕಡಾ ಇಪ್ಪತ್ತರಷ್ಟು ಬಡ ಕುಟುಂಬಗಳು ಈಗಾಗಲೇ ಒಂದು ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ನರೇಂದ್ರ ಮೋದಿ ಸರಕಾರದ ಯೋಜನೆಯಿಂದ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಇನ್ನೂ ಮುಂದುವರಿದು, ವಿಪಕ್ಷಗಳು ಈಗ ವರ್ಷಕ್ಕೆ ಎಪ್ಪತ್ತೆರಡು ಸಾವಿರ ರುಪಾಯಿ ನೀಡುವ ಬಗ್ಗೆ ಹೇಳುತ್ತಿವೆ. ಮೋದಿ ಸರಕಾರದ ಯೋಜನೆಗೆ ಹೋಲಿಸಿದರೆ ಅದು ಮಂಕಾಗಿ ಕಾಣುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.

ರಾಹುಲ್ ಗಾಂಧಿ ಸೋಮವಾರ ಮಾತನಾಡಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿ, ಅಧಿಕಾರಕ್ಕೆ ತಂದರೆ ಭಾರತ ಕಡು ಬಡುವ ಕುಟುಂಬಕ್ಕೆ ಕನಿಷ್ಠ ಆದಾಯ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ ಎಪ್ಪತ್ತೆರಡು ಸಾವಿರ ರುಪಾಯಿ ತಲುಪಿಸುವ ಭರವಸೆ ನೀಡಿದರು.
ದೇಶದಲ್ಲಿ ಇರುವ ಶೇಕಡಾ ಇಪ್ಪತ್ತರಷ್ಟು ಕಡು ಬಡವರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಅರುಣ್ ಜೇಟ್ಲಿ, ಈಗಾಗಲೇ ನರೇಂದ್ರ ಮೋದಿ ಸರಕಾರ ರಾಹುಲ್ ಗಾಂಧಿ ನೀಡಿದ ಭರವಸೆಗಿಂತ ಒಂದೂವರೆ ಪಟ್ಟು ಹೆಚ್ಚು ನೀಡುತ್ತಿದೆ ಎಂದಿದ್ದಾರೆ.

ಅರುಣ್ ಜೇಟ್ಲಿ ಮಾತನಾಡಿ, ರಾಹುಲ್ ಗಾಂಧಿ ಅವರದು ಸುಳ್ಳು ಭರವಸೆ ಎಂದಿದ್ದು, ಮತದಾರರನ್ನು ಸೆಳೆಯಲು ಹೀಗೆ ಯಾವಾಗಲೂ ಸುಳ್ಳು ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ಎಪ್ಪತ್ತು ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ, ಐವತ್ತೆರಡು ಸಾವಿರ ಕೋಟಿ ಮನ್ನಾ ಮಾಡಿದ್ದರು. ಅ ನಂತರ ಸಿಎಜಿ ವರದಿಯಲ್ಲಿ ಗೊತ್ತಾಗಿತ್ತು: ಆ ಪೈಕಿ ಬಹಳ ಹಣ ದೆಹಲಿ ಉದ್ಯಮಿಯನ್ನು ತಲುಪಿತ್ತು ಎಂದಿದ್ದಾರೆ.












Click it and Unblock the Notifications