ಜಮ್ಮು-ಕಾಶ್ಮೀರದ ಈ ಸ್ಥಿತಿ ಸುಸ್ಥಿರವಲ್ಲ: ಆಂಜೆಲಾ ಮರ್ಕೆಲ್
ನವದೆಹಲಿ, ನವೆಂಬರ್ 02: "ಜಮ್ಮು ಮತ್ತು ಕಾಶ್ಮೀರವನ್ನು ಇದೇ ಸ್ಥಿತಿಯಲ್ಲಿ ಬಹಳ ದಿನ ಮುನ್ನಡೆಸಲು ಸಾಧ್ಯವಿಲ್ಲ. ಖಂಡಿತವಾಗಿಯೂ ಅಲ್ಲಿ ಪರಿಸ್ಥಿತಿ ಬದಲಾಗಬೇಕು" ಎಂದು ಭಾರತ ಪ್ರವಾಸದಲ್ಲಿರುವ ಜರ್ಮನ್ ಚಾನ್ಸೆಲರ್ ಆಂಜೆಲಾ ಮರ್ಕೆಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಜೆಲಾ ಮರ್ಕೆಲ್ ಅವರ ನಡುವೆ ನಡೆದ ಇಂಟರ್ ಗವರ್ನ್ಮೆಂಟ್ ಕನ್ಸಲ್ಟೇಶನ್ ನಲ್ಲಿ ಉಭಯ ದೇಶಗಳ ಕುರಿತ ವಿವಿಧ ವಿಷಯಗಳ ಕುರಿತು ನಾಯಕರು ಚರ್ಚೆ ನಡೆಸಿದ್ದು, ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತು ಯಾವ ಚರ್ಚೆಯೂ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೆ ಪ್ರಧಾನಿ ಮೋದಿ ಮತ್ತು ಮರ್ಕೆಲಾ ನಡುವೆ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತಂತೆ ತಮ್ಮ ಯೋಜನೆಗಳೇನು ಎಂಬ ಬಗ್ಗೆ ಮೋದಿ ಚರ್ಚೆ ನಡೆಸಲಿದ್ದಾರೆ.

ಆದರೆ ಸದ್ಯದ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಯ ಬಗ್ಗೆ ಮಾತನಾಡಿದ ಮರ್ಕೆಲಾ, "ಜಮ್ಮು ಮತ್ತು ಕಾಶ್ಮೀರದ ಈಗಿನ ಸ್ಥಿತಿ ಬಹಳ ದಿನ ಮುಂದುವರಿಯುವುದಿಲ್ಲ. ಬದಲಾವಣೆಯಾಗಬೇಕಾದ್ದು ಅನಿವಾರ್ಯ" ಎಂದಿದ್ದಾರೆ.
ಅಕ್ಟೋಬರ್ 29 ರಂದು ಯುರೋಪಿನ ಒಟ್ಟು 27 ಸಂಸದರ ತಂಡ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿತ್ತು. "ಅಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಿದ ನಂತರ, ಭಯೋತ್ಪಾದನೆಯ ವಿರುದ್ಧ ಹೋರಾಡುವ ಭಾರತದ ಪ್ರಯತ್ನಕ್ಕೆ ನಾವು ಬೆಂಬಲ ಸೂಚಿಸುತ್ತೇವೆ" ಎಂದಿತ್ತು.
ಆಸಗ್ಟ್ 5 ರಂದು ಕೇಂದ್ರ ಸರ್ಕಾರವು ಭಾರತದ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡೂ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು.












Click it and Unblock the Notifications