ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಜಗನ್ ಮೋಹನ್ ರೆಡ್ಡಿ ಬೆಂಬಲ
ನವದೆಹಲಿ, ಜೂನ್ 23: ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಗುರುವಾರ ಎನ್ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಸೂಚಿಸಿದ್ದಾರೆ, ವೈಎಸ್ಆರ್ಸಿಪಿ ಶೇ 4ರಷ್ಟು ಮತಗಳನ್ನು ಹೊಂದಿದೆ.
ಎಸ್ಸಿ, ಎಸ್ಟಿ, ಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಪ್ರಾತಿನಿಧ್ಯಕ್ಕೆ ಒತ್ತು ನೀಡುತ್ತಿರುವ ತಮ್ಮ ಪಕ್ಷದ ಆಶಯಕ್ಕೆ ಅನುಗುಣವಾಗಿ ಜಗನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ, ಮುಖ್ಯಮಂತ್ರಿ ಜಗನ್ ಈ ಸಮುದಾಯಗಳ ಉನ್ನತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಮತ್ತು ಅವರು ಸಂಪುಟದಲ್ಲಿ ಈ ವರ್ಗಗಳಿಗೆ ಉತ್ತಮ ಪ್ರಾತಿನಿಧ್ಯ ನೀಡಿದ್ದಾರೆ.
ಮಂಗಳವಾರ ದ್ರೌಪದಿ ಮುರ್ಮು ಅವರನ್ನು ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ಎಂದು ಹೆಸರಿಸಲಾಯಿತು. ಶುಕ್ರವಾರ ಅವರು ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.

ನಿಗದಿತ ಕ್ಯಾಬಿನೆಟ್ ಸಭೆಯ ಕಾರಣ ಮುರ್ಮು ಅವರ ನಾಮಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ ಜಗನ್ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ವೈಎಸ್ಆರ್ಸಿಪಿ ಹೇಳಿದೆ. ಆದರೆ, ರಾಜ್ಯಸಭಾ ಸಂಸದ ವಿಜಯಸಾಯಿ ರೆಡ್ಡಿ ಮತ್ತು ಲೋಕಸಭೆ ಸಂಸದ ಮಿಥುನ್ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.
ಗುರುವಾರ ಮುರ್ಮು ದೆಹಲಿಗೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ಜುಲೈ 18 ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಬೆಂಬಲ ಸೂಚಿಸಿದ್ದ ನವೀನ್ ಪಟ್ನಾಯಕ್
ವೈಎಸ್ಆರ್ ಸಿಪಿ ಹೊರತುಪಡಿಸಿ, ನವೀನ್ ಪಟ್ನಾಯಕ್ ಅವರ ಬಿಜೆಡಿ ಕೂಡ ಒಡಿಶಾದ ಮುರ್ಮು ಅವರನ್ನು ಬೆಂಬಲಿಸಿದೆ. "ಒಡಿಶಾದ ಮಗಳು - ದ್ರೌಪದಿ ಮುರ್ಮು ಅವರನ್ನು ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಲು" ಸರ್ವಾನುಮತದ ಬೆಂಬಲವನ್ನು ನೀಡುವಂತೆ ಒಡಿಶಾ ಮುಖ್ಯಮಂತ್ರಿ ಬುಧವಾರ ರಾಜ್ಯ ಅಸೆಂಬ್ಲಿಯ ಎಲ್ಲಾ ಸದಸ್ಯರಿಗೆ ಮನವಿ ಮಾಡಿದರು.
ರಾಷ್ಟ್ರಪತಿ ಚುನಾವಣೆಗೆ ಮುರ್ಮು ನಾಮಪತ್ರ ಸಲ್ಲಿಸುವ ಕುರಿತು ಬಿಜೆಪಿ ಮುಖ್ಯಸ್ಥ ನಡ್ಡಾ ಅವರೊಂದಿಗೆ ಮಾತನಾಡಿದ್ದಾರೆ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ. ಪಟ್ನಾಯಕ್ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಜಗನ್ನಾಥ್ ಸರಕಾ ಮತ್ತು ತುಕುನಿ ಸಾಹು ನಾಮಪತ್ರಕ್ಕೆ ಸಹಿ ಹಾಕಿದ್ದಾರೆ ಮತ್ತು ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ಪಟ್ನಾಯಕ್ ಹೇಳಿದರು.












Click it and Unblock the Notifications