ರಫೇಲ್ ಬಗ್ಗೆ ಬಿಜೆಪಿ ಮಾಜಿ ಸಚಿವರ ಆರೋಪ ಸುಳ್ಳು ಎಂದ ಜೇಟ್ಲಿ
ನವದೆಹಲಿ, ಆಗಸ್ಟ್ 09: ರಫೇಲ್ ಹಗರಣದ ಬಗ್ಗೆ ನಿನ್ನೆ ಬಿಜೆಪಿ ಮಾಜಿ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಮತ್ತು ಸುಪ್ರಿಂ ವಕೀಲ ಪ್ರಶಾಂತ್ ಭೂಷಣ್ ಅವರು ರಫೇಲ್ ಹಗರಣದ ಬಗ್ಗೆ ಮಾಡಿದ್ದ ಆರೋಪಗಳಲ್ಲಿ ಲವಲೇಶದಷ್ಟೂ ಸತ್ಯವಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ರಿಯ ರಾಜಕಾರಣದಲ್ಲಿ ಅವರಿಗೆ ಆದ್ಯತೆ ಸಿಗದ ಕಾರಣ ತಮ್ಮ ಇರುವಿಕೆಯನ್ನು ಸಾಬೀತು ಮಾಡಲೆಂದು ಸರ್ಕಾರದ ವಿರುದ್ಧ ಸಂಸ್ಕರಿಸಿದ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಯಶವಂತ ಸಿನ್ಹಾ, ಅರುಣ್ ಶೌರಿ, ಪ್ರಶಾಂತ್ ಭೂಷಣ್ ಅವರ ಹೆಸರು ಹೇಳದೆ ಜರಿದಿರುವ ಜೇಟ್ಲಿ ಸರ್ಕಾರದ ಗೌರವಕ್ಕೆ ಮಸಿ ಬಳಿಯಲೆಂದು ಅವರು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿ ಮಾಜಿ ಸಚಿವರಾದ ಯಶವಂತ ಸಿನ್ಹಾ, ಅರುಣ್ ಶೌರಿ ಮತ್ತು ಸುಪ್ರಿಂ ವಕೀಲ ಪ್ರಶಾಂತ್ ಭೂಷಣ್ ಅವರು, ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ರಫೇಲ್ ಹಗರಣವು ಭಾರತೀಯ ರಕ್ಷಣಾ ಇಲಾಖೆ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ ಎಂದು ಆರೋಪಿಸಿದ್ದರು.

ಇದೇ ಆರೋಪಕ್ಕೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್, ಒಪ್ಪಂದವನ್ನು ರಾಷ್ಟ್ರದ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡೆ ಮಾಡಿಕೊಳ್ಳಲಾಗಿದೆ. ವಿರೋಧ ಪಕ್ಷಗಳು ಮತ್ತು ಕೆಲವರು ಸರ್ಕಾರವನ್ನು ಭ್ರಷ್ಟವೆಂದು ತೋರಿಸಲು ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.











Click it and Unblock the Notifications