ದೆಹಲಿ ಜನರ ಬಾಯಾರಿಕೆ ತಣಿಸುತ್ತಿರುವ ಬೆಂಗಳೂರು ಮೂಲದ 'ಭಗೀರಥ'
ಅವರನ್ನು 'ಮಟ್ಕಾ ಮ್ಯಾನ್' (ಮಡಕೆ ಮನುಷ್ಯ) ಅಂತಲೇ ಕರೆಯುತ್ತಾರೆ. ಮೂಲತಃ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ, 69 ವರ್ಷದ ಅಳಗ್ ನಟರಾಜನ್ ಸದ್ಯಕ್ಕೆ ದೆಹಲಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಾ ಮನೆಮನೆ ಮಾತಾಗಿದ್ದಾರೆ. ಈ ನಟರಾಜನ್ ಬದುಕೇ ಒಂದು ಸಿನಿಮಾಗುವಂತಿದೆ. ಇನ್ನು ಅವರು ಮಾಡುತ್ತಿರುವ ಸೇವೆ ಆ ಸಿನಿಮಾದ ಪಾರ್ಟ್ ಟೂ ಅನ್ನಬಹುದು.
ತಮ್ಮ ಯೌವನದ ದಿನಗಳಲ್ಲಿ ಬೆಂಗಳೂರಿನ ಮನೆ ಬಿಟ್ಟು ಟೂರಿಸ್ಟ್ ವೀಸಾ ಮೇಲೆ ಲಂಡನ್ ಗೆ ತೆರಳಿದ ನಟರಾಜನ್ ಯುನೈಟೆಡ್ ಕಿಂಗ್ ಡಮ್ ನಲ್ಲೇ ಉದ್ಯಮಿಯಾಗಿ ನಲವತ್ತು ವರ್ಷ ಕಳೆದಿದ್ದಾರೆ. ಹತ್ತು ವರ್ಷದ ಕೆಳಗೆ ಕರುಳಿನ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾಗಿದೆ.
ಪರಿಹಾರನಿಧಿಗೆ 1ಎಕರೆ ಜಮೀನನ್ನೇ ಬರೆದುಕೊಟ್ಟ ರೈತನ ಮಕ್ಕಳು!
ಸದ್ಯಕ್ಕೆ ಕ್ಯಾನ್ಸರ್ ನಿಂದ ಮುಕ್ತರಾಗಿ ದೆಹಲಿಯಲ್ಲಿ ವಾಸವಿದ್ದು, ತಮಗೆ ಸಾಧ್ಯವಿರುವ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈಗ ಅವರದು 'ಭುಜಂಗಯ್ಯನ ದಶಾವತಾರ'ದ ರೀತಿಯಲ್ಲಿ ನೀರು ಒದಗಿಸುವ ಪಾತ್ರ ನಿರ್ವಹಣೆ. ಕ್ಯಾನ್ಸರ್ ಅಂತಿಮ ಹಂತದಲ್ಲಿರುವವರಿಗೆ ನೆರವಾಗಿದ್ದೂ ಇದೆ. ಅನಾಥರ ಶವ ಸಂಸ್ಕಾರ ಮಾಡಿದ್ದೂ ಇದೆ.
2014ರ ದೆಹಲಿಯ ಕಡು ಬೇಸಿಗೆಯಲ್ಲಿ ನೀರು ಒದಗಿಸುವ ನಿರ್ಧಾರ
ಆದರೆ, 2014ರಲ್ಲಿ ದೆಹಲಿಯ ಕಡು ಬೇಸಿಗೆಯಿಂದ ನಿರ್ಧಾರ ಮಾಡಿದ್ದೇನೆಂದರೆ, ಜನರ ಬಾಯಾರಿಕೆ ನಿವಾರಿಸಬೇಕು. ಅದಕ್ಕಾಗಿ ಅವರ ಶ್ರಮವು ಪ್ರಾಮಾಣಿಕವಾಗಿ ಕಾಣಿಸುತ್ತದೆ. ದಕ್ಷಿಣ ದೆಹಲಿ ಹಾಗೂ ಪಂಚ್ ಶೀಲ್ ಪಾರ್ಕ್. ನನ್ನ ಸುತ್ತಲೂ ಇರುವ ಯಾರಿಗೆ ಅಗತ್ಯವಿದೆಯೋ ಅಂತಹವರಿಗೆ ನೆರವಾಗಬೇಕು ಅನ್ನೋದು ಉದ್ದೇಶ ಎನ್ನುವ ಅವರು, ಇತರರಿಗೆ ಇದೊಂದು ಮಾದರಿಯಾದರೆ ಸಂತೋಷ ಎನ್ನುತ್ತಾರೆ.
ಬೇಸಿಗೆಯಲ್ಲಿ ಎರಡು ಸಾವಿರ ಲೀಟರ್ ಗೂ ಹೆಚ್ಚು ನೀರು
ಅಂದಹಾಗೆ ಅಳಗ್ ನಟರಾಜನ್ ಏನು ಮಾಡ್ತಾರೆ ಗೊತ್ತಾ? ಮಡಕೆಯಲ್ಲಿ ನೀರು ಸಂಗ್ರಹಿಸಿ, ಅದನ್ನು ದೆಹಲಿಯ ಜನರಿಗಾಗಿ ಕುಡಿಯಲು ಒದಗಿಸುತ್ತಾರೆ. ದಕ್ಷಿಣ ದೆಹಲಿಯ ಸುತ್ತ ಮುತ್ತ ಇಂಥ ಹದಿನೈದಕ್ಕೂ ಹೆಚ್ಚು ಮಡಕೆ ಸ್ಟ್ಯಾಂಡ್ ಗಳನ್ನು ಅವರು ಮಾಡಿದ್ದಾರೆ. ಅದರ ಮೇಲೆ ಅವರ ವೈಯಕ್ತಿಕ ಸಂಪರ್ಕ ಸಂಖ್ಯೆ ಇದೆ. ಯಾವಾಗ ಮಡಕೆ ಖಾಲಿಯಾಗುತ್ತದೋ ಆಗ ಜನರೇ ಆ ಬಗ್ಗೆ ಮಾಹಿತಿ ಕೊಡುತ್ತಾರೆ. ಈ ಮಡಕೆಗಳಿಗೆ ಬೇಸಿಗೆ ತಿಂಗಳಲ್ಲಿ ದಿನಕ್ಕೆ ಎರಡು ಸಾವಿರ ಲೀಟರ್ ನೀರು ಬೇಕು. ಈ ನೀರನ್ನು ಹತ್ತಿರದಲ್ಲೇ ಇರುವ ಶಾಲೆಯಿಂದ ಸಹಾಯ ಮಾಡುವ ಮನಸ್ಸಿರುವವರು ಪೂರೈಸುತ್ತಾರೆ. ಇನ್ನೂ ಬೇಕಾದದ್ದನ್ನು ನಟರಾಜನ್ ತಮ್ಮ ಮನೆಯಿಂದ ಪೂರೈಕೆ ಮಾಡುತ್ತಾರೆ. ವ್ಯಾನ್ ಮೂಲಕ ಈ ಸ್ಟ್ಯಾಂಡ್ ಗಳನ್ನು ಅವರು ನಿರ್ವಹಣೆ ಮಾಡುತ್ತಾರೆ.
ನಡೆಯಲಾಗದಿದ್ದರೂ ಪ್ರವಾಹದ ಬಾಯಿಂದ ದಂಪತಿಯ ರಕ್ಷಿಸಿದ ಕತೆ ಕೇಳಿ!
ನೂರು ಸೈಕಲ್ ಪಂಪ್ ಗಳೂ ಇವೆ
ಇನ್ನು ದೆಹಲಿ ರಸ್ತೆಗಳಲ್ಲಿ ಸೈಕಲ್ ಓಡಿಸುವುದು ಬಹಳ ಕಷ್ಟ. ನಟರಾಜನ್ ತಮ್ಮ ನೆರೆಹೊರೆಯಲ್ಲಿ ನೂರು ಸೈಕಲ್ ಪಂಪ್ ಗಳನ್ನು ಇರಿಸಿದ್ದಾರೆ. ಇದರ ಮೂಲಕ ಬಡವರು ದಿನದ ಇಪ್ಪತ್ನಾಲ್ಕು ಗಂಟೆಯೂ ಪ್ರಯೋಜನ ಪಡೆದುಕೊಳ್ಳಬಹುದು. ಕೆಲವು ಸೈಕಲ್ ಪಂಪ್ ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಮತ್ತೆ ಕೆಲವನ್ನು ಮಡಕೆ ಸ್ಟ್ಯಾಂಡ್ ಜತೆಯಲ್ಲಿ ಇರಿಸಲಾಗಿದೆ. ಸೈಕಲ್ ಚಕ್ರದಿಂದ ಬೆಳಕು ಕಾಣಿಸುವಂಥ ಹಾಗೂ ಸುರಕ್ಷೆಗೆ ಪ್ರಾಮುಖ್ಯ ಕೊಡುವಂಥ ಸ್ಟಿಕ್ಕರ್ ಗಳನ್ನು ಕೂಡ ನಟರಾಜನ್ ಹಂಚುತ್ತಾರೆ. ಇನ್ನು ಆಯಾ ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣು-ತರಕಾರಿಗಳನ್ನು ನಲವತ್ತರಿಂದ ಐವತ್ತು ಕೇಜಿಯಷ್ಟು ಬಡವರಿಗೆ ಹಂಚುತ್ತಾರೆ. ಅದು ಕೂಡ ಮಡಕೆಗೆ ನೀರು ತುಂಬಲು ತಮ್ಮ ವ್ಯಾನ್ ನಲ್ಲಿ ತೆರಳುವ ವೇಳೆ ತೆಗೆದುಕೊಂಡು ಹೋಗುತ್ತಾರೆ. ಹಣ್ಣು-ತರಕಾರಿ ಕತ್ತರಿಸಿ, ಕೆಲವಕ್ಕೆ ಉಪ್ಪು-ಖಾರ ಸೇರಿಸಿ ಕೊಡುವುದು ಸಹ ಉಂಟು.
ನಟರಾಜ್ ಅವರದೊಂದು ವೆಬ್ ಸೈಟ್ ಇದೆ
ಈ ಎಲ್ಲ ಚಟುವಟಿಕೆಗಳಿಗೂ ನಟರಾಜನ್ ಅವರು ಬಳಸುವುದು ತಮ್ಮ ವ್ಯಾನ್ ಅನ್ನು. ಅದಕ್ಕೆ ಎಂಟುನೂರು ಲೀಟರ್ ಟ್ಯಾಂಕ್ ಅಳವಡಿಸಿದ್ದಾರೆ. ಪಂಪ್ ಮತ್ತು ಜನರೇಟರ್ ಇದೆ. ಅದೇ ವ್ಯಾನ್ ನಿಂದಲೇ ನೀರು ತಂದು ಮಡಕೆಗಳಿಗೆ ನೀರು ತುಂಬುತ್ತಾರೆ. ಬೇಸಿಗೆ ದಿನಗಳಲ್ಲಿ ನಾಲ್ಕು ಸಲ ಮಡಕೆಗಳಿಗೆ ನೀರು ತುಂಬಬೇಕಾಗುತ್ತದೆ ಎನ್ನುತ್ತಾರೆ. ಅಂದ ಹಾಗೆ ಅಳಗ್ ನಟರಾಜನ್ ಅವರದೊಂದು ವೆಬ್ ಸೈಟ್ ಇದೆ. ಅವರನ್ನು ಜನರು ಗುರುತಿಸುವ ಮಟ್ಕಾಮ್ಯಾನ್ ಡಾಟ್ ಕಾಮ್ ಅಂತಲೇ ಅದಕ್ಕೆ ಹೆಸರಿಟ್ಟಿದ್ದಾರೆ. ತಾವು ಮಾಡುತ್ತಿರುವ ಕೆಲಸಕ್ಕೆ ಬೇಕಾದ ಸಹಾಯದ ಬಗ್ಗೆ ಅದರಲ್ಲಿ ಮನವಿ ಮಾಡಿದ್ದಾರೆ.