ಹಣ ದೋಚಿದವರು ತೆರಳಿದ್ದು ಪವಿತ್ರ ಗಂಗಾ ಸ್ನಾನಕ್ಕೆ!
ಹಣ ಕಳವು ಮಾಡಿದವರು ಆ ತಕ್ಷಣ ಏನು ಮಾಡಬಹುದು ಎಂಬ ಪ್ರಶ್ನೆಗೆ ಹತ್ತಾರು ಉತ್ತರ ಸಿಗಬಹುದು. ಆದರೆ ದೆಹಲಿಯಲ್ಲಿ ಹಣ ದೋಚಿದ ಈ ಇಬ್ಬರು ಮಾಡಿದ ಕೆಲಸ ಮಾತ್ರ ತೀರಾ ವಿಚಿತ್ರ. ಅಂದಹಾಗೆ ಅದೇನು ಮಾಡಿದರು ಅಂತೀರಾ. ಗಂಗಾ ಸ್ನಾನಕ್ಕೆ ತೆರಳಿದ್ದರಂತೆ
ನವದೆಹಲಿ, ಡಿಸೆಂಬರ್ 27: ಪೂರ್ವ ದೆಹಲಿಯ ಪಾಂಡವ್ ನಗರ್ ನ ಎಟಿಎಂನ ಹೊರಭಾಗದಿಂದ ಹಗಲಿನ ವೇಳೆಯೇ ವ್ಯಾನ್ ನಿಂದ ಹಣ ಅಪಹರಿಸಿದ್ದ ಮೂವರನ್ನು ಬಂಧಿಸಿ, ಒಂಬತ್ತು ಲಕ್ಷ ವಶಪಡಿಸಿಕೊಂಡಿದ್ದಾರೆ ಪೊಲೀಸರು. ಬಿಟ್ಟೂ, ರೋಹಿತ್ ನಾಗರ್ ಮತ್ತು ಸನ್ನಿ ಶರ್ಮಾ ಬಂಧಿತರು. ಆದರೆ ನಿಜವಾದ ಕುತೂಹಲ ಇರೋದು ಹಣ ಅಪಹರಣದ ನಂತರ ಆ ಮೂವರು ಏನು ಮಾಡಿದ್ದರು ಎಂಬುದರಲ್ಲಿ.
ನಾಗರ್ ಹಾಗೂ ಶರ್ಮಾ ಹರಿದ್ವಾರ್ ಗೆ ಹೋಗಿದ್ದಾರೆ. ಅಲ್ಲಿಂದ ಹೃಷಿಕೇಷಕ್ಕೆ ತೆರಳಿ ಗಂಗೆಯಲ್ಲಿ ಸ್ನಾನ ಮಾಡಿದ್ದಾರೆ. ಆ ನಂತರ ಹತ್ತಿರದ ಎಲ್ಲ ದೇವಾಲಯಗಳಿಗೂ ಭೇಟಿ ಕೊಟ್ಟಿದ್ದಾರೆ. ಪ್ರಾಯಶಃ ತಮ್ಮ ಪಾಪ ತೊಳೆದುಹೋಗಲಿ ಅನ್ನೋ ಕಾರಣಕ್ಕೆ ಇದೆಲ್ಲ ಮಾಡಿದರೋ ಏನೋ![ಮಂಗಳೂರಿನಲ್ಲಿ 4 ಕಳ್ಳರ ಬಂಧನ, 7 ಬೈಕ್, 5 ಮೊಬೈಲ್ ವಶ]

ಆ ನಂತರ ಮುಸ್ಸೋರಿಗೆ ಹೋಗಿ ಪಾರ್ಟಿ ಮಾಡಿದ್ದಾರೆ. ಆದರೆ ಮನೆ ಬಿಟ್ಟು ಹೋಗುವುದಕ್ಕೆ ಹೆಂಡತಿ ಬಿಟ್ಟಿಲ್ಲ ಎಂಬ ಕಾರಣಕ್ಕೆ ಬಿಟ್ಟೂ ಉಳಿದಿಬ್ಬರ ಜತೆಗೆ ಹೋಗಿಲ್ಲ. "ಅವರಿಬ್ಬರು ತಮ್ಮ ಜತೆಗೆ ನಲವತ್ತು ಸಾವಿರ ರುಪಾಯಿ ತೆಗೆದುಕೊಂಡು ಹೋಗಿ ದೇವಸ್ಥಾನಗಳ ದರ್ಶನ ಮಾಡಿ, ಪವಿತ್ರವಾದ ನೀರಿನಲ್ಲಿ ಮುಳುಗಿದ್ದಾರೆ. ಆ ನಂತರ ಮುಸ್ಸೋರಿಗೆ ಹೋಗಿ ಪಾರ್ಟ್ ಮಾಡಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಹೀಗೆ ದೇವರ ದರ್ಶನ ಮಾಡಿಬಂದ ನಾಗರ್ ಹಾಗೂ ಶರ್ಮಾರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಬ್ಬರು ಬಿಟ್ಟೂ ಎಲ್ಲಿದಾನೆ ಎಂಬುದನ್ನು ಬಾಯಿ ಬಿಟ್ಟಿದ್ದಾರೆ. ಎಟಿಎಂಗಳಿಗೆ ಹಣ ಸರಬರಾಜು ಮಾಡುವ ಬ್ರಿಂಕ್ಸ್ ಸೆಕ್ಯೂರಿಟೀಸ್ ನಲ್ಲಿ ಈ ಮೂವರು ಕೆಲಸ ಮಾಡುತ್ತಿದ್ದರು. ಅಪಹರಿಸಿದ್ದ ಅಷ್ಟೂ ಹಣ ಹೊಸ ಎರಡು ಸಾವಿರ ಹಾಗೂ ಐನೂರು ರುಪಾಯಿ ನೋಟುಗಳಿದ್ದವು.












Click it and Unblock the Notifications