ಸಿಖ್ ಧ್ವಜ ಹಾರಿಸಿದ ಇಬ್ಬರು ಆರೋಪಿಗಳನ್ನು ಕೆಂಪುಕೋಟೆಗೆ ಕರೆದೊಯ್ದ ಪೊಲೀಸರು
ನವದೆಹಲಿ, ಫೆಬ್ರವರಿ.13: ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿ ದೀಪ್ ಸಿಧು ಮತ್ತು ಇಕ್ಬಾಲ್ ಸಿಂಗ್ ರನ್ನು ದೆಹಲಿ ಕ್ರೈಮ್ ಬ್ರ್ಯಾಂಚ್ ಪೊಲೀಸರು ಕೆಂಪುಕೋಟೆಗೆ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ಜನವರಿ.26ರಂದು 72ನೇ ಗಣರಾಜ್ಯೋತ್ಸವದ ದಿನವೇ ಕೆಂಪುಕೋಟೆ ಮೇಲೆ ಪ್ರಮುಖ ಆರೋಪಿ ದೀಪ್ ಸಿಧು ಸಿಖ್ ಧ್ವಜವನ್ನು ಹಾರಿಸಿದ್ದರು. ಈ ಹಿನ್ನೆಲೆ ಶನಿವಾರ ಘಟನೆಯ ಮರುಸೃಷ್ಟಿ ಮತ್ತು ವಿಚಾರಣೆಗಾಗಿ ಘಟನಾ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ಯಲಾಗಿದೆ.
#WATCH Delhi: 26th January violence accused Iqbal Singh and Deep Sidhu being taken from Delhi Police Crime Branch, Chanakyapuri. pic.twitter.com/9IZfThL8Hn
— ANI (@ANI) February 13, 2021
ದೆಹಲಿ ಹಿಂಸಾಚಾರದ ನಂತರ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ದೀಪ್ ಸಿಧುರನ್ನು ಫೆಬ್ರವರಿ.08ರಂದು ನವದೆಹಲಿಯಿಂದ 100 ಕಿಲೋ ಮೀಟರ್ ದೂರದಲ್ಲಿರುವ ಹರಿಯಾಣದ ಕರ್ನಲ್ ಬಳಿ ದೆಹಲಿ ವಿಶೇಷ ತಂಡದ ಪೊಲೀಸರು ಬಂಧಿಸಿದ್ದರು. ಮತ್ತೊಬ್ಬ ಪ್ರಮುಖ ಆರೋಪಿ ಇಕ್ಬಾಲ್ ಸಿಂಗ್ ನನ್ನು ಮಂಗಳವಾರ ರಾತ್ರಿ ಪಂಜಾಬ್ ಹರಿಯಾರ್ಪುರ್ ಬಳಿ ದೆಹಲಿ ವಿಶೇಷ ತಂಡದ ಪೊಲೀಸರು ಅರೆಸ್ಟ್ ಮಾಡಿದ್ದರು.
ಟ್ರ್ಯಾಕ್ಟರ್ ಜಾಥಾ ದಿನವೇ ಹಿಂಸಾಚಾರ:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ಜನವರಿ.26ರಂದು ರೈತರು ನಡೆಸಿದ ಟ್ರ್ಯಾಕ್ಟರ್ ಜಾಥಾ ಹಿಂಸಾಚಾರಕ್ಕೆ ತಿರುಗಿತ್ತು. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಒಂದು ಗುಂಪು ಓಡಾಡುತ್ತಿದ್ದರೆ, ಮತ್ತೊಂದು ತಂಡವು ಕೆಂಪುಕೋಟೆಗೆ ನುಗ್ಗಿ, ತ್ರಿವರ್ಣ ಧ್ವಜ ಎದುರಿನಲ್ಲಿ ಸಿಖ್ ಧ್ವಜವನ್ನು ಹಾರಿಸಿತ್ತು.
ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ಪ್ರಕರಣ: ಮತ್ತೆ ಮೂವರ ಬಂಧನ
ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗಷ್ಟೇ ದೆಹಲಿ ಪೊಲೀಸರು 12 ಮಂದಿ ಪ್ರಮುಖ ಆರೋಪಿಗಳ ಭಾವಚಿತ್ರವನ್ನು ಬಿಡುಗಡೆಗೊಳಿಸಿದ್ದರು. ದೀಪ್ ಸಿಧು ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.
ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪಿಗಳ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಪ್ರಮುಖ ಆರೋಪಿಗಳಾದ ಜಜ್ಬೀರ್ ಸಿಂಗ್, ಬುಟಾ ಸಿಂಗ್, ಸುಖ್ ದೇವ್ ಸಿಂಗ್, ಇಕ್ಬಾಲ್ ಸಿಂಗ್ ಬಗ್ಗೆ ಮಾಹಿತಿ ನೀಡಿದರೆ 50,000 ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.