ಆಮ್ ಆದ್ಮಿ ಕೈಗೆ ದೆಹಲಿ, ಸರ್ಕಾರ ರಚನೆ ಸನ್ನಿಹಿತ
ನವದೆಹಲಿ, ಡಿ. 22 : ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನ ಪಡೆದ ಆಮ್ ಆದ್ಮಿ ಪಕ್ಷ, ದೆಹಲಿಯಲ್ಲಿ ಹೊಸ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದ್ದು, ಸೋಮವಾರ ಅಧಿಕೃತವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಮತದಾರರ ಅಭಿಪ್ರಾಯಗಳಿಗೆ ನಾವು ಗೌರವ ನೀಡುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ಮಾತನಾಡಿದ ಎಪಿಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾವ್, ಕಾಂಗ್ರೆಸ್ನ ಬೆಂಬಲ ಪಡೆದು ಸರ್ಕಾರ ರಚಿಸಬೇಕೋ? ಬೇಡವೋ? ಎಂಬುದರ ಕುರಿತು ಆಮ್ಆದ್ಮಿ ಪಕ್ಷ ನಡೆಸಿರುವ ಜನಾಭಿಪ್ರಾಯ ಸಂಗ್ರಹ ಭಾನುವಾರ ಕೊನೆಗೊಳ್ಳಲಿದೆ, ಇದುವರೆಗೂ ಸುಮಾರು 7 ಲಕ್ಷ ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದರು. [ಸರ್ಕಾರ ರಚನೆ ಬಗ್ಗೆ ಜನಾಭಿಪ್ರಾಯ]

ಸರ್ಕಾರ ರಚನೆ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಿರುವುದು ದೇಶದ ಇತಿಹಾಸದಲ್ಲೇ ಮೊದಲು, ಇದುವರೆಗೂ ಸಿಕ್ಕ ಬಹುತೇಕ ಅಭಿಪ್ರಾಯಗಳು ಸರ್ಕಾರ ರಚಿಸಬೇಕು ಎಂಬ ಸಲಹೆ ನೀಡಿವೆ, ನಾವು ಮತದಾರರ ಅಭಿಪ್ರಾಯವನ್ನು ಗೌರವಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಈ ಮೂಲಕ ಸರ್ಕಾರ ರಚಿಸುವ ಸುಳಿವು ನೀಡಿದ್ದಾರೆ. [ರಾಷ್ಟ್ರಪತಿ ಆಡಳಿತ ಹೇರಲು ಸೂಚನೆ]
ನಾವು ಅಧಿಕಾರಕ್ಕಾಗಿ ಆಸೆ ಪಡುತ್ತಿಲ್ಲ, ಇಂದಿನ ದಿನದಲ್ಲಿ ದೇಶದ ರಾಜಕೀಯ ಶುದ್ಧೀಕರಣ ಅಗತ್ಯವಿದೆ, ರಾಜಕೀಯ ವ್ಯವಸ್ಥೆ ಬದಲಾಯಿಸಬೇಕಾಗಿದೆ ಆದ್ದರಿಂದ ಸರ್ಕಾರ ರಚನೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಜನರ ಅಭಿಪ್ರಾಯಗಳು ಸರ್ಕಾರ ರಚಿಸಿ ಎಂದು ಹೇಳುತ್ತಿರುವುದರಿಂದ ಸೋಮವಾರ ಎಪಿಪಿ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. [ದೆಹಲಿ ನಂತರ ಆಮ್ ಆದ್ಮಿ ಕಣ್ಣು ಕರ್ನಾಟಕದ ಮೇಲೆ]
ಒಂದು ವೇಳೆ ಕಾಂಗ್ರೆಸ್ ಬಾಹ್ಯ ಬೆಂಬಲ ಹೊಂದಿರುವ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಸಿಎಂ ಹುದ್ದೆ ವಹಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಚುನಾವಣೆಗೂ ಮೊದಲೇ ಕೇಜ್ರಿವಾಲ್ ಸಿಎಂ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿತ್ತು. ಸೋಮವಾರ ದೆಹಲಿ ಸರ್ಕಾರ ರಚನೆ ಕಸರತ್ತಿಗೆ ತೆರೆ ಬೀಳಲಿದ್ದು, ಆಮ್ ಆದ್ಮಿ ಗದ್ದುಗೆ ಏರಲು ಸಜ್ಜಾಗಿದೆ.
ದೆಹಲಿಯ ವಿಧಾನಸಭೆಯ ಒಟ್ಟು ಸ್ಥಾನ 70, ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಬಿಜೆಪಿ 32, ಆಮ್ ಆದ್ಮಿ 28, ಕಾಂಗ್ರೆಸ್ 8, ಇತರರು 2 ಸ್ಥಾನಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲಿವೆ.












Click it and Unblock the Notifications