ಸಮೀಕ್ಷೆ ವರದಿ : ದೆಹಲಿಯಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿ ಸಾಧ್ಯತೆ
ನವದೆಹಲಿ, ಮಾರ್ಚ್ 17 : ಲೋಕಸಭಾ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ದೆಹಲಿಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿವೆ. ಆದರೆ, ಎರಡೂ ಪಕ್ಷಗಳ ನಾಯಕರು ತಮ್ಮ ನಿರ್ಧಾರದ ಬಗ್ಗೆ ಪುನರ್ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷ ಆಂತರಿಕ ಸಮೀಕ್ಷೆಯೊಂದನ್ನು ನಡೆಸಿದೆ. ಈ ಸಮೀಕ್ಷೆಯ ವರದಿ ಅನ್ವಯ ಪಕ್ಷಗಳ ಮನಸ್ಸು ಬದಲಿಸಬಹುದಾಗಿದೆ. ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಬಹುದು ಎಂದು ಉನ್ನತ ಮೂಲಗಳ ಮಾಹಿತಿ ತಿಳಿಸಿದೆ.
ಕಾಂಗ್ರೆಸ್ಸಿಗೆ ಹಿಂತಿರುಗಲು ಸಿದ್ಧ ಎಂದ ಎಎಪಿ ನಾಯಕಿ ಅಲ್ಕಾ ಲಂಬಾ
ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ಕಾಂಗ್ರೆಸ್-ಎಎಪಿ ಶೇ 35ರಷ್ಟು ಮತಗಳನ್ನು ಪಡೆಯಲಿವೆ ಎಂದು ಸಮೀಕ್ಷೆ ಹೇಳಿದೆ. ಈ ವರದಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಗಂಭೀರವಾಗಿ ಪರಿಗಣಿಸಿದ್ದಾರೆ.
ಲೋಕಸಭೆ ಚುನಾವಣೆ: ದೆಹಲಿಯಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿಯಿಲ್ಲ
ದೆಹಲಿ ಕಾಂಗ್ರೆಸ್ ಘಟಕದ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕ ರಾಹುಲ್ ಗಾಂಧಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ, ಪಕ್ಷದ ಹಿರಿಯ ನಾಯಕರು ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡುವಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.
ದೆಹಲಿ: ಲೋಕಸಭೆಗೆ 6 ಅಭ್ಯರ್ಥಿಗಳನ್ನು ಘೋಷಿಸಿದ AAP
ಸಮೀಕ್ಷೆಯ ವರದಿಯಲ್ಲೇನಿದೆ?
ಕಾಂಗ್ರೆಸ್ ಸಮೀಕ್ಷೆಯ ಪ್ರಕಾರ ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ ಎಎಪಿಯ ಮತಬ್ಯಾಂಕ್ ಶೇ 28, ಕಾಂಗ್ರೆಸ್ನ ಮತ ಬ್ಯಾಂಕ್ ಶೇ 22 ರಷ್ಟಿದೆ. ಬಿಜೆಪಿ ಶೇ 35ರಷ್ಟು ಮತ ಬ್ಯಾಂಕ್ ಹೊಂದಿದೆ. ಎಎಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಹೆಚ್ಚು ಸ್ಥಾನಗಳನ್ನುಗಳಿಸಬಹುದು.
ಶೀಲಾ ದೀಕ್ಷಿತ್ ಭೇಟಿ
ದೆಹಲಿ ಕಾಂಗ್ರೆಸ್ನ ಹಿರಿಯ ನಾಯಕ ಪಿ.ಸಿ.ಚಾಕೋ ಅವರು ಶೀಲಾ ದೀಕ್ಷಿತ್ ಅವರನ್ನು ಭೇಟಿ ಮಾಡಿ ಸಮೀಕ್ಷೆಯ ವರದಿಯನ್ನು ವಿವರಿಸಿದ್ದಾರೆ. ಆದರೆ, ಅವರು ಎಎಪಿ ಜೊತೆ ಮೈತ್ರಿ ಇಲ್ಲ ಎಂಬ ತಮ್ಮ ನಿರ್ಧಾರವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿಲ್ಲ. 'ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ' ಹೇಳಿದ್ದಾರೆ.
ಕೇಜ್ರಿವಾಲ್ ಜೊತೆ ಮಾತುಕತೆ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್ ಮತ್ತು ಅಹಮದ್ ಪಟೇಲ್ ಅವರು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಜತೆ ಸಂಪರ್ಕದಲ್ಲಿದ್ದಾರೆ. ದೆಹಲಿ ಮತ್ತು ಹರ್ಯಾಣ ರಾಜ್ಯಗಳಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆಗಳು ನಡೆಯುತ್ತಿವೆ.
ರಾಹುಲ್ ತೀರ್ಮಾನಕ್ಕೆ ಬದ್ಧ
ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ದೆಹಲಿ ಕಾಂಗ್ರೆಸ್ ಘಟಕ ಹೇಳಿದೆ. ಎರಡೂ ರಾಜ್ಯದಲ್ಲಿ ಸೀಟು ಹಂಚಿಕೆ ವಿಚಾರದ ಕುರಿತು ಚರ್ಚಿಸಲು ರಾಹುಲ್ ಗಾಂಧಿ ಸಮಿತಿ ರಚನೆ ಮಾಡುವ ನಿರೀಕ್ಷೆ ಇದೆ. ದೆಹಲಿಯಲ್ಲಿ ಮೇ 12ರಂದು ಮತದಾನ ನಡೆಯಲಿದೆ.
ಎಎಪಿ ಏನು ಹೇಳಿತ್ತು
'ದೆಹಲಿಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ಮೈತ್ರಿ ಬಗ್ಗೆ ಹೇಳುವುದು ಕಷ್ಟ' ಎಂದು ಆಮ್ ಆದ್ಮಿ ಪಕ್ಷ ಹೇಳಿತ್ತು. 'ದೆಹಲಿಯ 7 ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸೋಲಿಸಲು ನಾವು ಸಿದ್ಧರಿದ್ದೇವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಬಹಳ ಹಿಂದಿದೆ' ಎಂದು ಎಎಪಿ ಹೇಳಿತ್ತು.