20 ಶಾಸಕರ ಅನರ್ಹತೆ ವಿರುದ್ಧ ದೆಹಲಿ ಹೈಕೊರ್ಟ್ ಮೊರೆ ಹೋದ ಎಎಪಿ
ನವದೆಹಲಿ, ಜನವರಿ 19: ತನ್ನ 20 ಶಾಸಕರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿರುವ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಎಎಪಿ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.
ಲಾಭದಾಯಕ ಹುದ್ದೆ ಆರೋಪದ ಮೇಲೆ ದೆಹಲಿ ಶಾಸನಸಭೆಯ 20 ಎಎಪಿ ಶಾಸಕರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿಗಳಿಗೆ ಚುನಾವಣಾ ಆಯೋಗ ಶಿಫಾರಸ್ಸು ಮಾಡಿದೆ.
20 ಎಎಪಿ ಶಾಸಕರ ಅನರ್ಹತೆಗೆ ಚುನಾವಣಾ ಆಯೋಗ ಶಿಫಾರಸ್ಸು
"ಈ ಬಗ್ಗೆ ಯಾವುದೇ ನಂಬಲರ್ಹ ಮಾಹಿತಿಗಳಿಲ್ಲ. ಎಲ್ಲಾ ವರದಿಗಳು ಮೂಲಗಳನ್ನು ಉಲ್ಲೇಖಿಸಿವೆ. ಈ 21 ಶಾಸಕರು ಸರಕಾರದ ಸವಲತ್ತುಗಳಾದ ಕಾರು, ಮನೆ ಅಥವಾ ಸಂಬಳಗಳನ್ನು ಪಡೆಯುತ್ತಿದ್ದರೇ ಎಂದು ಶಾಸಕರ ಕ್ಷೇತ್ರದ ಜನರನ್ನು ನಾನು ಕೇಳುತ್ತಿದ್ದೇನೆ. ಶಾಸಕರ ಅನರ್ಹತೆ ಬಗ್ಗೆ ಇಲ್ಲಿಯವರೆಗೆ ಚುನಾವಣಾ ಆಯೋಗದಲ್ಲಿ ಯಾವುದೇ ವಿಚಾರಣೆಗಳು ನಡೆದಿಲ್ಲ," ಎಂದು ಆಮ್ ಆದ್ಮಿ ಪಕ್ಷದ ಸೌರಭ್ ಭಾರಧ್ವಜ್ ಹೇಳಿದ್ದಾರೆ.
"ನಾವು ಚುನಾವಣಾ ಆಯೋಗಕ್ಕೆ ಪತ್ರದ ಪ್ರತಿಗಾಗಿ ಬೇಡಿಕೆ ಸಲ್ಲಿಸಿದ್ದೆವು. ಆದರೆ ನಮಗೆ ಚುನಾವಣಾ ಆಯೋಗದಿಂದ ಏನೂ ಸಿಕ್ಕಿಲ್ಲ. ಈ ಬಗ್ಗೆ ವಿಚಾರಣೆಯೇ ನಡೆದಿಲ್ಲ. ಇದೀಗ ಪ್ರಕರಣ ಹೈಕೋರ್ಟ್ ನಲ್ಲಿದೆ," ಎಂದು ಅನರ್ಹಗೊಂಡಿರುವ ಶಾಸಕ ರಾಜೇಶ್ ಗುಪ್ತಾ ಹೇಳಿದ್ದಾರೆ.
ಚುನಾವಣಾ ಆಯೋಗ ಶಾಸಕರನ್ನು ಅನರ್ಹಗೊಳಿಸಲು ಶಿಫಾರಸ್ಸು ಮಾಡಿರುವ ಬೆನ್ನಿಗೆ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆಗ್ರಹಿಸಿವೆ.
"ತನ್ನ ಹುದ್ದೆಯಲ್ಲಿ ಮುಂದುವರಿಯಲು ಕೇಜ್ರಿವಾಲ್ ನೈತಿಕತೆ ಕಳೆದುಕೊಂಡಿದ್ದಾರೆ. ಅವರು ರಾಜೀನಾಮೆಯನ್ನು ನೀಡಬೇಕು. ಈ ಸಂಬಂಧ ಕಾಂಗ್ರೆಸ್ ಜನಾಂದೋಲನವನ್ನು ಸಂಘಟಿಸಲಿದೆ," ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಹೇಳಿದ್ದಾರೆ.
"ಸಣ್ಣ ಅವಧಿಯಲ್ಲಿ 'ಭ್ರಷ್ಟಾಚಾರದ ವಿರುದ್ಧ ಭಾರತ'ದಿಂದ 'ನಾನು ಭ್ರಷ್ಟಾಚಾರಿ' ಎನ್ನುವಲ್ಲಿವರೆಗೆ ಆಮ್ ಆದ್ಮಿ ಪಕ್ಷ ನಡೆದು ಬಂದಿದೆ. ದೆಹಲಿಯಲ್ಲಿ ಸರಕಾರದಲ್ಲಿ ಉಳಿಯಲು ಅವರು ಇನ್ನೂ ನೈತಿಕತೆ ಉಳಿಸಿಕೊಂಡಿದ್ದಾರಾ?" ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನೆ ಮಾಡಿದ್ದಾರೆ.