ದೆಹಲಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಪ್ರತಿಭಟನಾಕಾರರು
ನವದೆಹಲಿ, ಜನವರಿ 10: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ವಿಶ್ವವಿದ್ಯಾಲಯಕ್ಕೆ ನುಗ್ಗಿ ಹಿಂಸಾಚಾರ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ದೆಹಲಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯು ಸಂಸತ್ ಬಳಿ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಮುಂದಾದರು. ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದಂತಾ ಘಟನೆಗಳ ಬಗ್ಗೆ ವರದಿಯಾಗಿದೆ.
ದೆಹಲಿಯ ವಿಜಯ್ ಚೌಕ್ ಬಳಿ ನೈಋತ್ಯ ವಿಭಾಗದ ಹೆಚ್ಚುವರಿ ಡಿಸಿಪಿ ಮೇಲೆಯೇ ಪ್ರತಿಭಟನಾಕಾರನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಮೊದಲು ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು. ಅತ್ತ ಸಾಗಿದ ಪ್ರತಿಭಟನಾನಿರತರನ್ನು ಪೊಲೀಸರು ತಡೆದಿದ್ದರು.

ಸಂಸತ್ ನತ್ತ ಹೊರಟಿದ್ದ ಪ್ರತಿಭಟನಾಕಾರರು:
ದೆಹಲಿಯ ಸಂಸತ್ ನತ್ತ ಪ್ರತಿಭಟನಾಕಾರರು ಮೆರವಣಿಗೆಯನ್ನು ನಡೆಸಲು ಮುಂದಾಗಿದ್ದರು. ಇದನ್ನು ಅರಿತ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡರು. ವಿಜಯ್ ಚೌಕ್ ಬಳಿ ಎಲ್ಲ ಪ್ರತಿಭಟನಾಕಾರರನ್ನು ತಡೆಯಲು ಬ್ಯಾರಿಕೇಡ್ ಹಾಕಲಾಗಿತ್ತು. ಈ ವೇಳೆ ನುಗ್ಗಿ ಬಂದ ಪ್ರತಿಭಟನಾಕಾರರ ಪೈಕಿ ಒಬ್ಬ ವ್ಯಕ್ತಿಯು ನೈಋತ್ಯ ಹೆಚ್ಚುವರಿ ಡಿಸಿಪಿ ಮೇಲೆಯೇ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮೊದಲು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಜ. 5ರಂದು ನಡೆದ ಹಿಂಸಾಚಾರ ವಿರುದ್ಧ ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರಯತ್ನಿಸಿದ ಜೆಎನ್ಯು ವಿದ್ಯಾರ್ಥಿಗಳನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ದೆಹಲಿಯ ಮಂಡಿ ಹೌಸ್ನಿಂದ ರಾಷ್ಟ್ರಪತಿಭವನಕ್ಕೆ ಗುರುವಾರ ಸಂಜೆ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು. ಮಧ್ಯಾಹ್ನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ಜತೆ ನಡೆದ ಜೆಎನ್ಯು ವಿದ್ಯಾರ್ಥಿಗಳ ಮಾತುಕತೆ ವಿಫಲವಾಗಿತ್ತು.












Click it and Unblock the Notifications