ಆತ ಸುಟ್ಟು ಕರಕಲಾಗುತ್ತಿದ್ದರೆ ಜನ ವಿಡಿಯೋ ತೆಗೆಯುತ್ತಿದ್ದರು!
ದೆಹಲಿಯಲ್ಲಿ ರಸ್ತೆ ಮಧ್ಯೆ ದಿಢೀರನೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಅದರೊಳಗೆ ಇದ್ದ ವ್ಯಕ್ತಿ ಹೊರಬರಲು ಆಗಿಲ್ಲ. ಆದರೆ ಅಲ್ಲಿದ್ದ ಜನ ಆ ಘಟನೆಯ ಫೋಟೋ, ವಿಡಿಯೋ ಮಾಡುತ್ತಿದ್ದರೇ ವಿನಾ ಆ ವ್ಯಕ್ತಿಯನ್ನು ಬದುಕಿಸುವ ಪ್ರಯತ್ನ ಪಟ್ಟಿಲ್ಲ.
ನವದೆಹಲಿ, ಫೆಬ್ರವರಿ 9: ಆತನ ಹೆಸರು ಸಚಿನ್ ತ್ಯಾಗಿ. ಅಡುಗೆ ಮಾಡು, ಮನೆಗೆ ಬರ್ತಿದೀನಿ ಎಂದು ಪತ್ನಿಗೆ ಫೋನ್ ಮಾಡಿ ಹೇಳಿದ್ದರು. ಮಕ್ಕಳಿಗೋಸ್ಕರ ಒಂದಷ್ಟು ಗಿಫ್ಟ್ ತಗೊಂಡು, ಹದಿನೆಂಟು ತಿಂಗಳ ಹಿಂದಷ್ಟೆ ಸಾಲ ಮಾಡಿ ಖರೀದಿಸಿದ್ದ ಕಾರಿನಲ್ಲಿ ಮನೆ ಕಡೆಗೆ ಹೊರಟಿದ್ದರು. ಮಂಡೋಲಿ ಜೈಲಿನ ಮುಂಭಾಗ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತು. ಸಚಿನ್ ಜೀವಂತ ಸುಟ್ಟು ಹೋದರು.
ಇದು ಯಾವುದೋ ಸಿನಿಮಾ ಕಥೆಯಲ್ಲ. ದೆಹಲಿಯಲ್ಲಿ ಈಚೆಗೆ ನಡೆದ ಘಟನೆ. ರಸ್ತೆಯಲ್ಲಿದ್ದ ಕಾರು ಸುಟ್ಟುಹೋಗುತ್ತಿದ್ದದ್ದನ್ನು ಜನ ಫೋಟೋ ತೆಗೆದು, ವಿಡಿಯೋ ಮಾಡಿಕೊಳ್ಳುತ್ತಿದ್ದರೆ ವಿನಾ ತ್ಯಾಗಿ ಸಹಾಯಕ್ಕೆ ಯಾರೂ ಬಂದಿಲ್ಲ. ಇನ್ನು ಈ ಸುದ್ದಿ ತಿಳಿದು ಸ್ಥಳಕ್ಕೆ ಹೋದ ಕುಟುಂಬ ವರ್ಗದವರ ಜೊತೆ ವಾಟ್ಸಪ್, ಬ್ಲೂ ಟೂಥ್ ಮೂಲಕ ಹಂಚಿಕೊಳ್ಳಲು ಜನ ಮುಗಿಬಿದ್ದಿದ್ದಾರೆ.[59 ಮಂದಿ ಸಾವಿಗೆ ಕಾರಣನಾದವನಿಗೆ 1 ವರ್ಷ ಜೈಲು]
ಕಾರು ಬೆಂಕಿಯಲ್ಲಿ ಹೊತ್ತಿ ಉರಿಯುವಾಗ ಸಚಿನ್ ಗೆ ಗಾಜು ಅಥವಾ ಬಾಗಿಲು ಒಡೆದು ಹೊರಬರಲು ಸಾಧ್ಯವಾಗಿಲ್ಲ. ಆ ಕಾರಿನ ಸುತ್ತಮುತ್ತ ಕಲ್ಲೋ ಮತ್ತೊಂದೋ ಕಾಣಲಿಲ್ಲ. ಅದರಿಂದಲೇ ಸ್ಪಷ್ಟವಾಗುತ್ತಿತ್ತು, ಅಲ್ಲಿನ ಜನ ಸಚಿನ್ ನ ಜೀವ ಕಾಪಾಡಲು ಪ್ರಯತ್ನ ಕೂಡ ಮಾಡಿಲ್ಲ ಎಂದು ತ್ಯಾಗಿಯ ಸಂಬಂಧಿಕರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಆ ಮನೆಯಲ್ಲಿ ದುಡಿಯುತ್ತಿದ್ದದ್ದು ಸಚಿನ್ ಮಾತ್ರ. ಆತನ ಸಂಪಾದನೆಯಲ್ಲೇ ತನ್ನ ತಾಯಿಗೆ ಚಿಕಿತ್ಸೆ ಕೂಡ ಕೊಡಿಸುತ್ತಿದ್ದರು. ತನ್ನ ಕುಟುಂಬ ನಿರ್ವಹಣೆಗೆ ಹೆಚ್ಚಿನ ಸಂಪಾದನೆಗಾಗಿ ಹೆಚ್ಚು ಸಮಯ ಕೆಲಸ ಮಾಡುತ್ತಿದ್ದರು ಎಂದು ಕೂಡ ಹೇಳಿದ್ದಾರೆ. ಇತ್ತೀಚೆಗೆ ಕರ್ನಾಟಕದ ಕೊಪ್ಪಳದಲ್ಲೂ ಅಂಥದ್ಡೇ ಘಟನೆ ನಡೆದದ್ದನ್ನು ಸ್ಮರಿಸಬಹುದು.[ಕಾರಿಗೆ ಲಾರಿ ಡಿಕ್ಕಿ, ಸಂಬಂಧಿಕರ ಮನೆಗೆ ಹೋಗುತ್ತಿದ್ದ ಮಹಿಳೆ ಸಾವು]
ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯ ವಿಡಿಯೋ ಮಾಡುವುದರಲ್ಲಿ ಹಾಗೂ ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದ ಜನ, ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ದಿದ್ದರೆ ಅತ ಬದುಕುವ ಸಾಧ್ಯತೆಗಳಿದ್ದವು ಎಂದು ವೈದ್ಯರೇ ಹೇಳಿದ್ದರು.