ಹಣ ವಂಚಿಸಿ ದೇಶ ಬಿಟ್ಟು ಓಡಿದವರ ಸಂಖ್ಯೆ 51: ಸರ್ಕಾರ ಕೊಟ್ಟ ಮಾಹಿತಿ
ನವದೆಹಲಿ, ಡಿಸೆಂಬರ್ 3: ಇದುವರೆಗೂ 51 ಮಂದಿ ಒಟ್ಟು 17,900 ಕೋಟಿ ರೂ. ವಂಚನೆ ಮಾಡಿ ದೇಶಬಿಟ್ಟು ಪರಾರಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ಗೆ ತಿಳಿಸಿದೆ.
ರಾಜ್ಯಸಭೆಯಲ್ಲಿ 'ದೇಶಭ್ರಷ್ಟ ಆರ್ಥಿಕ ಅಪರಾಧಿಗಳು' ಕುರಿತಾದ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಈ ಮಾಹಿತಿ ಒದಗಿಸಿದ್ದಾರೆ.
ಇದುವರೆಗಿನ ದಿನಾಂಕದವರೆಗೆ ಸಿಬಿಐ 51 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿ ನೀಡಿದೆ. ಒಟ್ಟು 66 ಇಂತಹ ಪ್ರಕರಣಗಳಿದ್ದು, ನಾಪತ್ತೆಯಾದವರು ಇತರೆ ದೇಶಗಳಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

'ಈ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ವಂಚನೆ ಮಾಡಿರುವ ಒಟ್ಟು ಮೊತ್ತ ಅಂದಾಜು 17,947.11 ಕೋಟಿ ರೂ.ದಷ್ಟಿದೆ' ಎಂದು ಠಾಕೂರ್ ತಿಳಿಸಿದರು.
ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಸುಂಕದ ಮಂಡಳಿ (ಸಿಬಿಐಸಿ) ದೇಶವನ್ನು ಅಕ್ರಮವಾಗಿ ತೊರೆದ ಆರು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಬಗ್ಗೆ ವರದಿ ನೀಡಿದೆ. ಹಾಗೆಯೇ ಜಾರಿ ನಿರ್ದೇಶನಾಲಯವು 2018ರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ಅಡಿಯಲ್ಲಿ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ. ಎಂಟು ಮಂದಿ ವಿರುದ್ಧ ಇ.ಡಿ ಗಡಿಪಾರು ಕೋರಿಕೆ ಸಲ್ಲಿಸಿದ್ದು, ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಸಹ ಹೊರಡಿಸಿದೆ ಎಂದು ಹೇಳಿದರು.












Click it and Unblock the Notifications