ದೆಹಲಿ ಚುನಾವಣೆ ಘೋಷಣೆ; ಅಖಾಡಕ್ಕಿಳಿದ ಅಮಿತ್ ಶಾ
ನವದೆಹಲಿ, ಜನವರಿ 07 : ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಈ ಬಾರಿ ಅಧಿಕಾರ ಹಿಡಿಯಲು ಬಿಜೆಪಿ ತಂತ್ರ ರೂಪಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣಾ ಆಯೋಗ ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 8ರಂದು ಮತದಾನ ನಡೆಯಲಿದೆ. ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ. ದೆಹಲಿಯಲ್ಲಿ ಪ್ರಸ್ತುತ ಆಮ್ ಆದ್ಮಿ ಪಕ್ಷದ ಸರ್ಕಾರವಿದೆ.
ಇಂದೇ ದೆಹಲಿ ಚುನಾವಣೆ ನಡೆದರೆ ಆಮ್ ಆದ್ಮಿ ಪಕ್ಷಕ್ಕೆ ಬಹುಮತ ಪಕ್ಕಾ
"ಆಮ್ ಆದ್ಮಿ ಪಕ್ಷ ತನ್ನ ಅಧಿಕಾರ ಅವಧಿಯಲ್ಲಿ ಭರವಸೆಗಳನ್ನು ನೀಡುತ್ತಾ ಬಂದಿತು. ಕಳೆದ ಮೂರು ತಿಂಗಳಿನಲ್ಲಿ ಜನರ ತೆರಿಗೆ ಹಣವನ್ನು ಪ್ರಚಾರಕ್ಕಾಗಿ ಬಳಸಿಕೊಂಡಿದೆ" ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟ್ವೀಟ್ನಲ್ಲಿ ಆರೋಪಿಸಿದ್ದಾರೆ.
ಸಿ-ವೋಟರ್ ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪೂರ್ವ ಸಮೀಕ್ಷೆ ನಡೆಸಿದೆ. ಆಮ್ ಆದ್ಮಿ ಪಕ್ಷ 54-64 ಸೀಟು, ಬಿಜೆಪಿ 3-13 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ. ಆದರೆ, ಬಿಜೆಪಿ ಈ ಬಾರಿ ಸರ್ಕಾರ ರಚನೆಯ ವಿಶ್ವಾಸದಲ್ಲಿದೆ.
ದೆಹಲಿ ಜನರಿಗೆ ಈಗ 'ಬೆಂಕಿ' ಎಂದರೆ ಬಲು ಇಷ್ಟ!
ಫೆಬ್ರವರಿ 8ರಿಂದ ಹೊಸ ಅಧ್ಯಾಯ
"ಎಎಪಿ ಸರ್ಕಾರ ಐದು ವರ್ಷಗಳ ಕಾಲ ದೆಹಲಿಯ ಜನರ ದಾರಿ ತಪ್ಪಿಸಿದೆ. ಫೆಬ್ರವರಿ 8ರ ಬಳಿ ರಾಷ್ಟ್ರ ರಾಜಧಾನಿಯ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ" ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಹಬ್ಬದಲ್ಲಿ ಸೋಲು ಖಚಿತ
"ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿದೆ. ನನಗೆ ವಿಶ್ವಾಸವಿದೆ. ಐದು ವರ್ಷಗಳ ಕಾಲ ದಾರಿ ತಪ್ಪಿಸಿದ ಸರ್ಕಾರವನ್ನು ಜನರು ಸೋಲಿಸುತ್ತಾರೆ" ಎಂದು ಅಮಿತ್ ಶಾ ದೆಹಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ.
ಬಿಜೆಪಿ ಸರ್ಕಾರ ರಚನೆಯಾಗಲಿದೆ
"ರಾಷ್ಟ್ರ ರಾಜಧಾನಿಯಲ್ಲಿ ಜನರ ಬೇಡಿಕೆಗಳನ್ನು ಈಡೇರಿಸುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರವನ್ನು ನಾವು ರಚನೆ ಮಾಡಲಿದ್ದೇವೆ" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಹೊಸ ದಾಖಲೆ ಬರೆಯುತ್ತಾರೆ
"ದೆಹಲಿಯ ಜನರು ಎಎಪಿ ಸರ್ಕಾರ ನೀಡಿದ ಉಚಿತ ವೈ-ಫೈ, 15 ಲಕ್ಷ ಸಿಸಿಟಿವಿ, ಹೊಸ ಕಾಲೇಜು, ಹೊಸ ಆಸ್ಪತ್ರೆಗಾಗಿ ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ. ದೆಹಲಿಯ ನಿವಾಸಿಗಳು ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲಿದ್ದಾರೆ ಈ ಮೂಲಕ ದಾಖಲೆ ಬರೆಯಲಿದ್ದಾರೆ" ಎಂದು ಅಮಿತ್ ಶಾ ಹೇಳಿದ್ದಾರೆ.