ಗ್ರಾಮೀಣ ಜನರು ದಯವಿಟ್ಟು ದಸರಾ ನೋಡಲು ಬರಬೇಡಿ; ಮೈಸೂರು ಜಿ.ಪಂ. ಸಿಇಒ ಮನವಿ
ಮೈಸೂರು, ಅಕ್ಟೋಬರ್ 13: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ದಯವಿಟ್ಟು ಈ ಬಾರಿ ದಸರಾ ಮಹೋತ್ಸವಕ್ಕೆ ಬರಬೇಡಿ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ ಮನವಿ ಮಾಡಿಕೊಂಡಿದ್ದಾರೆ.
ಈ ಬಾರಿ ದಸರಾ ಮಹೋತ್ಸವದಲ್ಲಿ ಜಂಬೂಸವಾರಿ ಮೆರವಣಿಗೆ ಇರುವುದಿಲ್ಲ. ಅರಮನೆಗೆ ಮಾತ್ರ ಜಂಬೂಸವಾರಿ ಸೀಮಿತವಾಗಿದೆ. ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಸಾರ್ವಜನಿಕರಿಗೆ ಜಂಬೂಸವಾರಿ ನೋಡುವ ಅವಕಾಶವನ್ನು ನೀಡಲಾಗಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದ ಜನರು ಮೈಸೂರು ನಗರಕ್ಕೆ ಬರಬೇಡಿ. ಎಲ್ಲರೂ ಮನೆಯಲ್ಲೇ ಇದ್ದು ಟಿ.ವಿ.ಗಳಲ್ಲಿ ದಸರಾ ನೋಡಿ ಎಂದು ಕೇಳಿಕೊಂಡಿದ್ದಾರೆ.
ಮೈಸೂರಿನಲ್ಲಿ ಕೋವಿಡ್ ಚಿಕಿತ್ಸೆಗೆ ವಾರದೊಳಗೆ 428 ಹೆಚ್ಚುವರಿ ಹಾಸಿಗೆ
ಸಾರ್ವಜನಿಕರ ಅನುಕೂಲಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಟೆಲಿಕಾಸ್ಟ್ ವ್ಯವಸ್ಥೆ ಮಾಡಲಾಗುತ್ತದೆ. ಹೀಗಾಗಿ ಮನೆಯಲ್ಲೇ ಕುಳಿತು ದಸರಾ ವೈಭವವನ್ನು ನೀವು ಕಣ್ತುಂಬಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಸೋಂಕಿನ ಲಕ್ಷಣ ಇರುವವರು ಪರೀಕ್ಷೆ ಮಾಡಿಸಿಕೊಳ್ಳಿ. 60 ವರ್ಷ ಮೇಲ್ಪಟ್ಟವರು ಹಾಗೂ ಮಕ್ಕಳು ಅನಾವಶ್ಯಕ ಓಡಾಟವನ್ನು ನಿಲ್ಲಿಸಿ. ದಸರಾ ನೋಡಲು ಬಂದು ಕೊರೊನಾ ಹರಡುವುದು ಬೇಡ ಎಂದು ಹೇಳಿದ್ದಾರೆ.
Recommended Video
ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು: ಮೈಸೂರು ಜಿಲ್ಲೆಯಲ್ಲಿ ಇಂದು 416 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 42789 ಆಗಿದೆ. ಒಟ್ಟು ಬಿಡುಗಡೆಯಾದವರ ಸಂಖ್ಯೆ 35050 ಆಗಿದ್ದು, 6843 ಸಕ್ರಿಯ ಪ್ರಕರಣಗಳಿವೆ. ಇಂದು ಮೂರು ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು 896 ಮಂದಿ ಕೊರೊನಾ ವೈರಸ್ ನಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.