ಪ್ರಿಯತಮೆಯನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ
ಮೈಸೂರು, ಫೆಬ್ರವರಿ 4: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಬುಧವಾರ ನಡೆದಿದೆ.
ಮಂಡ್ಯ ಮೂಲದ ಅಮೂಲ್ಯ ಮತ್ತು ಲೋಕೇಶ್ ಸಾವಿಗೆ ಶರಣಾದ ಪ್ರೇಮಿಗಳಾಗಿದ್ದು, ಮೈಸೂರಿನ ಹೆಬ್ಬಾಳು ಬಡಾವಣೆಯ ಹೋಟೆಲ್ ನಲ್ಲಿ ಈ ಇಬ್ಬರು ಸಾವಿನ ಮನೆಯ ಕದ ತಟ್ಟಿದ್ದಾರೆ.
ಬುಧವಾರ ಮಧ್ಯಾಹ್ನ ಹೋಟೆಲ್ ಗೆ ಬಂದಿದ್ದ ಪ್ರೇಮಿಗಳು, ರೂಮಿನ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡ ಹೋಟೆಲ್ ಸಿಬ್ಬಂದಿಗಳು ಬಾಗಿಲು ತೆರೆದು ನೋಡಿದಾಗ ಲೋಕೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತು ಅಮೂಲ್ಯ ಕೊಲೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಮೊದಲಿಗೆ ಹಗ್ಗದಲ್ಲಿ ಕತ್ತು ಬಿಗಿದು ಅಮೂಲ್ಯಳನ್ನು ಕೊಲೆ ಮಾಡಿರುವ ಲೋಕೇಶ್, ನಂತರ ಸ್ನೇಹಿತರಿಗೆ ಕರೆ ಮಾಡಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ.
ತಾನು ಅಮೂಲ್ಯಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಸ್ನೇಹಿತರಿಗೆ ಮಾಹಿತಿ ನೀಡಿದ್ದನು. ಅಮೂಲ್ಯ ಪ್ರಥಮ ಎಂ.ಎಸ್ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಇನ್ನು ಲೋಕೇಶ್ ಸಿವಿಲ್ ಕಂಟ್ರಾಕ್ಟ್ ಮಾಡಿಸುತ್ತಿದ್ದ, ಹಾಗೂ ವಿವಾಹಿತನಾಗಿದ್ದು, ಎರಡು ಮಕ್ಕಳಿದ್ದಾರೆ ಎನ್ನಲಾಗಿದೆ. ಇನ್ನು ಆತ್ಮಹತ್ಯೆ ಮತ್ತು ಕೊಲೆಗೆ ನಿಖರ ಕಾರಣವೇನೆಂದು ಸದ್ಯಕ್ಕೆ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಡಿಸಿಪಿ ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications