ಸಿಡಿಲು ಬಡಿದು ರಸ್ತೆ ಬದಿಯೇ ಯುವಕ ಸಾವು
ಭೇರ್ಯ, ಆಗಸ್ಟ್ 19: ಭೇರ್ಯ ವ್ಯಾಪ್ತಿಯಲ್ಲಿ ಶನಿವಾರ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದರೆ. ಮತ್ತೊಬ್ಬರು ಬೈಕ್ ಸಮೇತ ನಾಲೆಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಚಿಕ್ಕಭೇರ್ಯ ಗ್ರಾಮದ ಶಿನೇಗೌಡರ ಮಗ ರಮೇಶ್ (25) ಸಿಡಿಲು ಬಡಿದು ಮೃತಪಟ್ಟರೆ, ಸಾಲಿಗ್ರಾಮ ಹೋಬಳಿ ಅಂಕನಹಳ್ಳಿ ಗ್ರಾಮದ ದಿ.ಕುಮಾರ ಅವರ ಮಗ ಗೌತಮ್ (28) ಬೈಕ್ ನಿಂದ ಆಕಸ್ಮಿಕವಾಗಿ ನಾಲೆಗೆ ಬಿದ್ದು ಸಾವನ್ನಪ್ಪಿದ್ದಾರೆ.

ಚಿಕ್ಕಭೇರ್ಯ ಗ್ರಾಮದ ರಮೇಶ್ ವ್ಯಾಪಾರಕ್ಕೆಂದು ಬೆಳಗ್ಗೆ 5 ಗಂಟೆಗೆ ಮನೆಯಿಂದ ಮುಂಜನಹಳ್ಳಿ ಗ್ರಾಮದಲ್ಲಿ ಬಸ್ ಹತ್ತಲು ತೆರಳುತ್ತಿರುವಾಗ ಮಳೆ ಜೋರಾಗಿದ್ದರಿಂದ ಮರದ ಕೆಳಗೆ ನಿಂತಿದ್ದಾರೆ. ಆಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ರಸ್ತೆಯಲ್ಲಿ ಹೋಗುವ ಗ್ರಾಮಸ್ಥರೊಬ್ಬರು ಹತ್ತಿರ ಬಂದು ನೋಡಿದಾಗ ಯುವಕ ರಮೇಶ್ ಮೃತಪಟ್ಟಿದ್ದು ಖಾತರಿಯಾಗಿದ್ದು, ಅವರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ನಾಲೆಗೆ ಬಿದ್ದು ಯುವಕ ಸಾವು
ಅಂಕನಹಳ್ಳಿ ಗ್ರಾಮದ ದಿ. ಕುಮಾರ ಅವರ ಮಗ ಗೌತಮ್ ತಮ್ಮ ಜಮೀನಿನಿಂದ ಮನೆಗೆ ತನ್ನ ಹೀರೊ ಹೋಂಡಾ ಬೈಕ್ ನಲ್ಲಿ ತೆರಳುತ್ತಿದ್ದಾಗ ತಿರುವಿನಲ್ಲಿ ಚಾಮರಾಜ ಎಡದಂಡೆ ನಾಲೆಗೆ ಆಕಸ್ಮಿಕವಾಗಿ ಬಿದ್ದು, ಸಾವನ್ನಪ್ಪಿದ್ದಾರೆ.
ಗೌತಮ್ ಇತ್ತೀಚೆಗಷ್ಟೇ ಸರಸ್ವತಿ ಎಂಬವರನ್ನು ಮದುವೆಯಾಗಿದ್ದರು. ಪತ್ನಿ ಮತ್ತು ತಾಯಿ ಮಾತ್ರ ಇದ್ದು, ತಾನೇ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಈತ ಮೃತಪಟ್ಟಿದ್ದರಿಂದ ಮನೆಯ ಆಧಾರ ಸ್ಥಂಭವೇ ಕುಸಿದಂತಾಗಿದೆ.
ಈ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಸಾಲಿಗ್ರಾಮ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಮಹೇಶ್ ಪ್ರಕರಣ ದಾಖಲಿಸಿದ್ದಾರೆ.











Click it and Unblock the Notifications