ಯೋಗ ದಿನ: ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ ಅರಮನೆ
ಮೈಸೂರು, ಜೂನ್ 12: ವಿಶ್ವಯೋಗ ದಿನಾಚರಣೆಗೆ ಮೈಸೂರು ನಗರ ಹಾಗೂ ಅರಮನೆ ಆವರಣ ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದೆ. ಕೊರೊನಾ ಕಾರಣ ಎರಡು ವರ್ಷ ನಡೆದಿರಲಿಲ್ಲವಾದರೂ ಅದನ್ನು ಹೊರತುಪಡಿಸಿದಂತೆ ಕಳೆದ ಕೆಲವು ವರ್ಷಗಳಿಂದ ಮೈಸೂರಿನಲ್ಲಿ ಜೂ.21ರಂದು ಯೋಗ ದಿನಾಚರಣೆ ನಡೆಸುತ್ತಾ ಬರಲಾಗುತ್ತಿದೆ. ಆದರೆ ಈ ಬಾರಿಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಕಾರಣ ಹೆಚ್ಚಿನ ಮಹತ್ವ ಬಂದಿದೆ.
ಪ್ರಧಾನಿ ಅವರು ಈ ಹಿಂದೆ ಯೋಗ ದಿನಾಚರಣೆ ನಡೆಸಿದ ವೇಳೆ ಮೈಸೂರಿಗೆ ಬರುತ್ತಾರೆ ಎಂದು ಹೇಳಲಾಗುತ್ತಿತ್ತಾದರೂ ಆಗ ಆಗಮಿಸಿರಲಿಲ್ಲ. ಆದರೆ ಈ ಬಾರಿ ಆಗಮಿಸುತ್ತಿರುವುದು ಮೈಸೂರಿಗರು ಮಾತ್ರವಲ್ಲದೆ, ಇಡೀ ರಾಜ್ಯ ಹೆಮ್ಮೆಪಡುವಂತಾಗಿದೆ.
ಕುಕ್ಕೆ ಸುಬ್ರಹ್ಮಣ್ಯ; ಅಧಿಕಾರಿ V/S ಆಡಳಿತ ಮಂಡಳಿ ಜಟಾಪಟಿ
ಇದು ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಎಂಬ ಹಿರಿಮೆಗೂ ಪಾತ್ರವಾಗಿದೆ. ಯೋಗ ದಿನಾಚರಣೆಗಾಗಿ ಯೋಗಪಟುಗಳು ಭಾಗವಹಿಸಲು ಅನುಕೂಲವಾಗುವಂತೆ ಅರಮನೆ ಅಂಗಳದಲ್ಲಿ ಸಿದ್ಧತಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಅರಮನೆ ಮತ್ತು ಅರಮನೆ ಆವರಣದಲ್ಲಿನ ಉದ್ಯಾನಕ್ಕೆ ಹೊಸ ಕಳೆ ಬಂದಿದೆ.
ಪ್ರಧಾನಿ ಮೋದಿ ಆಗಮನ: ಮೈಸೂರಿನ ರಸ್ತೆಗಳಿಗೆ ಬಂತು ಜೀವ ಕಳೆ
ಇನ್ನು ಮೈಸೂರಿನಲ್ಲಿ ವಿಶ್ವ ಯೋಗ ದಿನಾಚರಣೆ ಮೂಲಕ ದೇಶದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದರಿಂದ ಅರಮನೆ ಆವರಣದಲ್ಲಿ ಪ್ರಧಾನ ವೇದಿಕೆ ತಯಾರಾಗುತ್ತಿದೆ. ಹೀಗಾಗಿ, ಈ ಯೋಗ ಉತ್ಸವಕ್ಕೆ ಹೆಚ್ಚಿನ ಮಹತ್ವ ಬಂದಿದೆ. ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಯೋಗಪಟುಗಳಿಗಾಗಿ ಹುಲ್ಲಿನ ಹಾಸಿಗೆ
ಈಗಾಗಲೇ ಅರಮನೆ ಆಡಳಿತ ಮಂಡಳಿಯು ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದು, ಆವರಣದಲ್ಲಿ ಬೆಳೆದಿದ್ದ ಗಿಡಗಂಟಿ ಮತ್ತು ಕಸ ಇನ್ನಿತರ ಅನುಪಯುಕ್ತ ಕಳೆಯನ್ನು ಹೊರತೆಗೆದು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಜೊತೆಗೆ ಉದ್ಯಾನಕ್ಕೆ ಹೂವಿನ ಕುಂಡ ಹಾಗೂ ಅಲಂಕಾರಿಕ ಗಿಡಗಳನ್ನು ಜೋಡಿಸುವ ಮೂಲಕ ಚೆಲುವನ್ನು ಇಮ್ಮಡಿಗೊಳಿಸುವ ಕೆಲಸವನ್ನು ಮಾಡಲಾಗುತ್ತದೆ.
ಅರಮನೆ ಆವರಣಕ್ಕೆ ಯೋಗ ಮಾಡಲು ಬರುವ ಯೋಗಾಸಕ್ತರಿಗೆ ಹೂವಿನಲ್ಲಿ ಅರಳಿದ ಯೋಗಾಸನದ ಆಕೃತಿಗಳು ಹಾಗೂ ವಿವಿಧ ಬಣ್ಣದ ಗುಲಾಬಿಗಳಿಂದ ಯೋಗದ ವಿವಿಧ ಭಂಗಿಗಳನ್ನು ಬಿಂಬಿಸುವ ಆಕೃತಿಗಳನ್ನು ರಚನೆ ಮಾಡುವ ಕೆಲಸ ಕೂಡ ಭರದಿಂದಲೇ ಸಾಗುತ್ತಿದೆ. ಇದೆಲ್ಲದರ ನಡುವೆ ಯೋಗಪಟುಗಳು ಯೋಗಾಸನ ಮಾಡಲು ಅನುಕೂಲವಾಗಲು ಹುಲ್ಲಿನ ಹಾಸಿಗೆಯನ್ನು ಸಜ್ಜುಗೊಳಿಸುವ ಕಾರ್ಯವೂ ಸಮಾರೋಪಾದಿಯಲ್ಲಿ ನಡೆಯುತ್ತಿದೆ.
ಮ್ಯಾಟ್ ಅಳವಣಿಗೆ
ಈಗಾಗಲೇ ಮಳೆ ಸುರಿದ ಪರಿಣಾಮ ಉದ್ಯಾನದಲ್ಲಿ ಹುಲ್ಲು ಸೇರಿದಂತೆ ಗಿಡಗಳು ಬೆಳೆದಿದ್ದು ಅದನ್ನೆಲ್ಲ ತೆಗೆದು ಯೋಗ ಮಾಡಲು ಅನುಕೂಲವಾಗುವಂತೆ ಮ್ಯಾಟ್ ಅಳವಡಿಕೆಗೆ ಸಹಕಾರಿಯಾಗುವಂತೆ ಯಂತ್ರದ ಮೂಲಕ ಹುಲ್ಲನ್ನು ಸಮತಟ್ಟು ಮಾಡಿ, ಹುಲ್ಲಿನ ಹಾಸಿಗೆ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಅರಮನೆಯಲ್ಲಿ ನೆಲಹಾಸುಗಳನ್ನು ಸರಿಪಡಿಸಲಾಗುತ್ತಿದೆ.
ಇನ್ನು ಅರಮನೆ ಆವರಣದಲ್ಲಿರುವ ಶ್ರೀಭುವನೇಶ್ವರಿ ದೇವಾಲಯ, ಕೋಟೆ ಆಂಜನೇಯಸ್ವಾಮಿ ದೇವಾಲಯದ ಹಿಂಭಾಗದ ರಸ್ತೆಯಿಂದ ಕೋಡಿ ಸೋಮೇಶ್ವರ ದೇವಾಲಯ ಹಾಗೂ ಜಯಮಾರ್ತಾಂಡ ದ್ವಾರ ಸೇರುವ ರಸ್ತೆಗೆ ಹೊಸದಾಗಿ ಇಂಟರ್ಲಾಕ್ ಅಳವಡಿಸಲಾಗುತ್ತಿದೆ. ಇಲ್ಲಿನ ರಸ್ತೆಯ ಎರಡೂ ಬದಿ ರಸ್ತೆ ವಿಭಜಕಕ್ಕೆ ಒಂದೂವರೆ ಅಡಿ ಎತ್ತರದ ಸಿಮೆಂಟ್ ಬ್ಲಾಕ್ ಅಳವಡಿಸಲಾಗುತ್ತಿದೆ.
45 ನಿಮಿಷ ಯೋಗ
ದಸರಾ ಆನೆಗಳನ್ನು ಕಟ್ಟಿ ಹಾಕುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಣ್ಣಿನಿಂದ ಕೂಡಿದೆ. ಇದನ್ನು ಇಂಟರ್ಲಾಕ್ ರಸ್ತೆಯಾಗಿ ಮಾರ್ಪಡಿಸುತ್ತಿದ್ದು, ಇಡೀ ಅರಮನೆ ಆವರಣವನ್ನು ಸುಂದರಗೊಳಿಸಲಾಗುತ್ತಿದೆ.
ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂ. 21ರಂದು ಬೆಳಗ್ಗೆ 6.30ಕ್ಕೆ ಆಗಮಿಸಲಿದ್ದು, ಬಳಿಕ ಅರ್ಧ ಗಂಟೆ ಕಾಲ ಸಭಾ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 7ರಿಂದ 45ನಿಮಿಷಗಳ ಕಾಲ ಯೋಗ ಪ್ರದರ್ಶನ ನಡೆಯಲಿದೆ. ಈ ವೇಳೆ ಪ್ರಧಾನಿಯೂ ಯೋಗಾಸನ ಮಾಡಲಿದ್ದಾರೆ. ಇವರೊಂದಿಗೆ ವೇದಿಕೆ ಮೇಲೆ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಹಾಗೂ ಜಿ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಶಾಲಾ ಮಕ್ಕಳಿಗೂ ಅವಕಾಶ
ಸಾರ್ವಜನಿಕರಿಗೆ ಯೋಗ ಮಾಡಲು ಅರಮನೆ ಎದುರಿನ ವಿಶಾಲ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಅಂದಾಜು 15ಸಾವಿರ ಜನರಿಗೆ ಅವಕಾಶ ನೀಡಲಾಗುತ್ತಿದೆ. ಇಲ್ಲಿ ಭಾಗವಹಿಸುವ ಯೋಗಪಟುಗಳು ಅಂದು ಬೆಳಗ್ಗೆ 5.30ರ ಒಳಗೆ ಅರಮನೆ ಆವರಣವನ್ನು ಪ್ರವೇಶ ಮಾಡಬೇಕಿದೆ. ಅರಮನೆ ಆವರಣಕ್ಕೆ ಪೌರಕಾರ್ಮಿಕರು, ಅಂಗವಿಕಲರು, ಶಾಲಾ ಮಕ್ಕಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗುತ್ತಿದೆ.
ಒಂದೆಡೆ ಯೋಗ ಕಾರ್ಯಕ್ರಮಕ್ಕೆ ಅರಮನೆ ಸೇರಿದಂತೆ ನಗರದಲ್ಲಿ ಸರ್ವ ರೀತಿಯಲ್ಲಿ ಕಾರ್ಯಗಳನ್ನು ಮಾಡಲಾಗುತ್ತಿದ್ದರೆ, ಮತ್ತೊಂದೆಡೆ ಬಿಗಿಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗುತ್ತಿದೆ.