ಅಕ್ಕಪಕ್ಕದಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ, ಮಧ್ಯದಲ್ಲಿ ಸುತ್ತೂರು ಶ್ರೀ
ಮೈಸೂರು, ಮಾರ್ಚ್ 2: ಎರಡು ದಿನಗಳ ಹಿಂದೆ, ನಿಮ್ಮಂತ ಹಿರಿಯ ರಾಜಕಾರಣಿಯಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ, ನೀಚ ರಾಜಕಾರಣ ಎಂದು ಭಾರತ-ಪಾಕ್ ಅಶಾಂತಿ ವಿಚಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ದ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ ಮತ್ತು ಬಿಎಸ್ವೈ, ಶನಿವಾರ (ಮಾ 2) ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ.
ಪತ್ರಕರ್ತರ ಸಮ್ಮೇಳನದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಮತ್ತು ಸಿದ್ದರಾಮಯ್ಯ ಆಗಲೇ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಲ್ಪ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಯಡಿಯೂರಪ್ಪ, ಸುತ್ತೂರು ಶ್ರೀಗಳಿಗೆ ನಮಸ್ಕರಿಸಿದರು. ಯಡಿಯೂರಪ್ಪ ಬರುತ್ತಿದ್ದಂತೆಯೇ ಸಿದ್ದರಾಮಯ್ಯ ಕೈಕುಲುಕಿ ಅವರನ್ನು ಸ್ವಾಗತಿಸಿದರು. ಇಬ್ಬರೂ ಮುಖಂಡರು ಸುತ್ತೂರು ಶ್ರೀಗಳ ಅಕ್ಕಪಕ್ಕದಲ್ಲಿ ಕೂತಿದ್ದರು.
ಇದಾದ ನಂತರ ಸ್ವಲ್ಪ ಹೊತ್ತು ಕಿರುಹೊತ್ತಿಗೆಯನ್ನು ನೋಡುತ್ತಿದ್ದ ಸಿದ್ದರಾಮಯ್ಯನವರನ್ನು, ಯಡಿಯೂರಪ್ಪ ತಾವಾಗಿಯೇ ಮಾತನಾಡಿಸಿದರು. ಸ್ವಲ್ಪಹೊತ್ತು ಇಬ್ಬರ ನಡುವೆ ಚರ್ಚೆ ನಡೆಯುತ್ತಿತ್ತು, ಆಗ, ಸಿದ್ದರಾಮಯ್ಯ ಅದೇನೋ ಹಾಸ್ಯ ಚಟಾಕಿ ಹಾರಿಸಿದರು. ಅದಕ್ಕೆ ಸುತ್ತೂರು ಶ್ರೀಗಳು ನಗುತ್ತಾ ಸಾಕ್ಷಿಯಾದರು.

ವೇದಿಕೆಗೆ ಯಡಿಯೂರಪ್ಪ ಬಂದು ಸಿದ್ದರಾಮಯ್ಯನವರನ್ನು ಹಸ್ತಲಾಘವ ಮಾಡುತ್ತಿದ್ದಂತೆಯೇ, ನೆರೆದಿದ್ದ ಜನಸ್ತೋಮ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಆಗ, ಇಬ್ಬರೂ ಜನರತ್ತ ಮುಗುಳ್ನಕ್ಕಿ ಕೈಬೀಸಿದರು.
ಪಾಕ್ ದಾಳಿ ಹಾಗೂ ವಿಂಗ್ ಕಮಾಂಡರ್ ಘಟನೆಯಿಂದ 22 ಸೀಟು ಗೆಲುತ್ತೇವೆ ಎಂಬ ಯಡಿಯೂರಪ್ಪ ಹೇಳಿಕೆಗೆ ಸಿದ್ದು ತೀಕ್ಷ್ಣ ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪ ಮಾತನಾಡುವುದನ್ನು ನೋಡಿದರೆ ರಾಜಕೀಯ ಮಾತು ಎಂಬ ಸಂಶಯ ಬರುತ್ತದೆ. ಅವರು ಮುಖ್ಯಮಂತ್ರಿ ಆಗಿದ್ದವರು, ಈ ರೀತಿ ಮಾತನಾಡಬಾರದು ಎಂದು ಸಿದ್ದರಾಮಯ್ಯ ಕಿವಿಮಾತನ್ನು ಹೇಳಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 22ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲು ಈ ಏರ್ಸ್ಟ್ರೈಕ್ ನೆರವಾಗಲಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಕೆಲಸವನ್ನು ಪ್ರಧಾನಿ ಮೋದಿಯವರು 40 ವರ್ಷದ ಬಳಿಕ ಮಾಡಿದ್ದಾರೆ. ಹುತಾತ್ಮರಾದವರ ಒಂದೊಂದು ಹನಿ ರಕ್ತಕ್ಕೂ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಪ್ರಧಾನಿ ಹೇಳಿದ್ದರು ಅದನ್ನು ಮಾಡಿ ತೋರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದರು.












Click it and Unblock the Notifications