ಯದುವಂಶದ ಉತ್ತರಾಧಿಕಾರಿ ಡಿ.29ಕ್ಕೆ ಘೋಷಣೆ?
ಮೈಸೂರು, ಡಿ. 20 : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಂತರ ಯದುವಶಂದ ಉತ್ತರಾಧಿಕಾರಿ ಎಂಬ ಪ್ರಶ್ನೆ ಜನರಲ್ಲಿ ಕುತೂಹಲ ಮೂಡಿಸಿತ್ತು. ಸದ್ಯ ಈ ಕುತೂಹಲಗಳಿಗೆ ತೆರೆ ಬೀಳುವ ಕಾಲ ಹತ್ತಿರವಾಗಿದೆ. ಶ್ರೀಕಂಠದತ್ತ ಒಡೆಯರ್ ಉತ್ತರಾಧಿಕಾರಿ ಆಯ್ಕೆ ಬಗ್ಗೆ ಡಿ.29ರಂದು ಮೈಸೂರಿನಲ್ಲಿ ಸಭೆ ನಡೆಯಲಿದ್ದು, ಅಂದು ಘೋಷಣೆಯಾಗುವ ಸಾಧ್ಯತೆ ಇದೆ.
ಡಿ.29ರ ಭಾನುವಾರ ಮೈಸೂರಿನಲ್ಲಿ ಶ್ರೀಕಂಠದತ್ತ ನರಸಿಂಹ ರಾಜಒಡೆಯರ್ ಉತ್ತರಾಧಿಕಾರಿ ನೇಮಕ ಕುರಿತಂತೆ ಸಭೆ ನಡೆಯಲಿದೆ. ಒಡೆಯರ್ ಪತ್ನಿ ಪ್ರಮೋದಾದೇವಿ, ಒಡೆಯರ್ ಕುಟುಂಬದವರು ಮತ್ತು ಆಪ್ತರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಸಭೆಯ ನಂತರ ಉತ್ತರಾಧಿಕಾರಿ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. [ಯದುವಂಶಕ್ಕೆ ಉತ್ತರಾಧಿಕಾರಿ ಯಾರು? ಸಸ್ಪೆನ್ಸ್!]

ಶ್ರೀಕಂಠದತ್ತ ಒಡೆಯರ್ ಅಕ್ಕ ಗಾಯಿತ್ರಿ ದೇವಿ ಅವರ ಮಗ ಕಾಂತರಾಜ ಅರಸ್ ಉತ್ತರಾಧಿಕಾರಿಯಾಗಿ ನೇಮಕವಾಗುವ ಬಗ್ಗೆ ಭಾರೀ ಸುದ್ದಿ ಹಬ್ಬಿದೆ. ಇದಕ್ಕೆ ಪೂರಕವೆಂಬಂತೆ ಕಾಂತರಾಜ ಅರಸ್ ಶ್ರೀಕಂಠದತ್ತ ಒಡೆಯರ್ ಅಂತಿಮ ಸಂಸ್ಕಾರದ ಎಲ್ಲಾ ವಿಧಿವಿಧಾನಗಳನ್ನು ನೆರೆವೇರಿಸಿದ್ದಾರೆ. ಪ್ರಮೋದಾದೇವಿ ಅವರ ಚಿಕ್ಕಪ್ಪನ ಮೊಮ್ಮಗ ಶರಣ್ಕುಮಾರ್ ಹೆಸರು ಕೇಳಿಬರುತ್ತಿದೆ. [ಶ್ರೀಕಂಠದತ್ತ ಒಡೆಯರ್ ಉತ್ತರಾಧಿಕಾರಿ ಯಾರು?]
ಯದುವಂಶದ ಉತ್ತರಾಧಿಕಾರಿಯ ಘೋಷಣೆ ಡಿ.29ರಂದು ನಡೆದರೂ, ಧನುರ್ಮಾಸ ಇರುವ ಕಾರಣ ಸಂಕ್ರಾಂತಿಯ ನಂತರ ಪಟ್ಟಾಭಿಷೇಕ ನಡೆಸಲು ತೀರ್ಮಾನಿಸಲಾಗಿದೆ. ಸರ್ಕಾರ ಮತ್ತು ಅರಮನೆ ನಡುವಿನ ಒಪ್ಪಂದದಂತೆ ಯಾರು ಮಹಾರಾಜರಾಗುತ್ತಾರೆ? ಯಾರು ಉತ್ತರಾಧಿಕಾರಿಯಾಗುತ್ತಾರೆ? ಎಂಬ ಮಾಹಿತಿಯನ್ನು ಮೊದಲು ಕೋರ್ಟ್ ಮತ್ತು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. [ಒಡೆಯರ್ ಅವರಿಗೆ ಚಿತ್ರ ನಮನ]
ಉತ್ತರಾಧಿಕಾರಿ ಘೋಷಣೆ ನಂತರ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಂಕ್ರಾಂತಿ ನಂತರ ಪಟ್ಟಾಭಿಷೇಕದ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ. ರತ್ನ ಖಚಿತ ಸಿಂಹಾಸನ ಅಲಂಕರಿಸಿ ಪಟ್ಟಾಭಿಷೇಕ ನೆರವೇರಿಸುವುದು ಸಂಪ್ರದಾಯವಾಗಿದ್ದು, ದಿನಾಂಕ ನಿಗದಿ ಬಳಿಕ ಉಳಿದ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದೆ.












Click it and Unblock the Notifications