ಎಲ್ಲ ಇಲ್ಲಗಳ ನಡುವೆ ಜೀವನ ದೂಡುತ್ತಿರುವ ಯಡಹಳ್ಳಿ
ಮೈಸೂರು, ಜುಲೈ 05: ಬೀದಿ ದೀಪಗಳಿಲ್ಲ.. ಸುಸಜ್ಜಿತ ರಸ್ತೆಯಿಲ್ಲ.. ಕುಡಿಯಲು ಶುದ್ಧ ನೀರಿಲ್ಲ.. ಮಕ್ಕಳಿಗೆ ಶಾಲೆಯಿಲ್ಲ.. ಹೀಗೆ ಇಲ್ಲಗಳ ನಡುವೆ ಜನ ಜೀವನ ಸಾಗಿಸುತ್ತಿರುವ ಗ್ರಾಮವೊಂದು ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕಿಗೆ 35 ಕಿ.ಮೀ. ದೂರದಲ್ಲಿದೆ.

ಸ್ವಾತಂತ್ರ್ಯ ಬಂದು 69 ವರ್ಷ ಕಳೆದರೂ ಇನ್ನು ಜನ ಸೌಲಭ್ಯವಂಚಿತರಾಗಿ ಬದುಕುತ್ತಿರುವ ಗ್ರಾಮದ ಹೆಸರು ಯಡಹಳ್ಳಿ. ಈ ಹಳ್ಳಿ ಜನಪ್ರತಿನಿಧಿಗಳಿಗೆ ಚುನಾವಣೆ ಬಂದಾಗ ಮಾತ್ರ ನೆನಪಾಗುತ್ತದೆ. ಆಗ ಹಳ್ಳಿಗೆ ತೆರಳಿ ಅಭಿವೃದ್ಧಿ ಬಗ್ಗೆ, ಸೌಲಭ್ಯ ಕಲ್ಪಿಸಿಕೊಡುವ ಬಗ್ಗೆ ಭರವಸೆ ನೀಡಿ ಬರುವ ಜನಪ್ರತಿನಿಧಿಗಳು ಬಳಿಕ ಅತ್ತ ಸುಳಿಯುವುದೇ ಇಲ್ಲ. [ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']

ಇದರಿಂದಾಗಿ ಇಲ್ಲಿನ ಜನ ಸೌಲಭ್ಯ ವಂಚಿತರಾಗಿ ಕಷ್ಟದಲ್ಲೇ ದಿನದೂಡಬೇಕಾಗಿದೆ. ಇಲ್ಲಿ ವಾಸಿಸುವ ಹೆಚ್ಚಿನವರು ರೈತರು ಮತ್ತು ಕೂಲಿಕಾರ್ಮಿಕರಾಗಿದ್ದಾರೆ. ಇಲ್ಲಿನವರು ಹೋರಾಟ ಮಾಡಿ ಸೌಲಭ್ಯವನ್ನು ಪಡೆಯಲು ಮುಂದೆ ಬಾರದ ಕಾರಣ ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. [ಸೆಸ್ಕಾಂ ಪಿಡಬ್ಲ್ಯೂಡಿ ಕಿತ್ತಾಟದ ನಡುವೆ ರಸ್ತೆ ಅನಾಥ!]

ಗ್ರಾಮದಲ್ಲಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಳೆದ ಮೂರು ವರ್ಷಗಳ ಹಿಂದೆ ಬೀಗ ಹಾಕಲಾಗಿದೆ. ಹೀಗಾಗಿ ಇಲ್ಲಿರುವ ಸುಮಾರು 10ಕ್ಕೂ ಹೆಚ್ಚು ಮಕ್ಕಳು ಮೂರೂವರೆ ಕಿ.ಮೀ ದೂರವಿರುವ ಹುರಾ ಗ್ರಾಮದ ಶಾಲೆಗೆ ಹೋಗುವಂತಾಗಿದೆ. [ಸೋರುತಿಹುದು ಮಚ್ಚರೆ ಶಾಲೆಯ ಮಾಳಿಗೆ, ಪಾಠ ಮಾಡುವುದು ಹೇಗೆ?]

ಇನ್ನು ಪ್ರತಿಗ್ರಾಮಕ್ಕೂ ಅಂಗನವಾಡಿಯನ್ನು ಕಲ್ಪಿಸಬೇಕೆಂಬ ಸರ್ಕಾರದ ಬಯಕೆ ಇಲ್ಲಿ ಈಡೇರಿದಂತೆ ಕಾಣುತ್ತಿಲ್ಲ. ಇದುವೆರೆಗೂ ಇಲ್ಲಿ ಅಂಗನವಾಡಿ ತೆರೆಯಬೇಕೆಂದು ಯಾರಿಗೂ ಅನಿಸಲೇ ಇಲ್ಲ. ಹೀಗಾಗಿ ಮಕ್ಕಳು, ಗರ್ಭಿಣಿಯರು, ಬಾಂಣಂತಿಯರು, ಪಕ್ಕದ ಊರಿನ ಅಂಗನವಾಡಿಗೆ ಹೋಗುವಂತಾಗಿದೆ. [ಪುಟ್ಟಬಸಮ್ಮನ ಜಗಳದಿಂದ ಅಂಗನವಾಡಿ ಕೂಸು ಬಡ!]

ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಜನ ನಡೆದುಕೊಂಡು ಅಥವಾ ಖಾಸಗಿ ವಾಹನಗಳಲ್ಲಿ ತೆರಳಬೇಕು. ಏನಾದರೂ ಅವಘಡಗಳು ಸಂಭವಿಸಿದರೆ ಆಂಬ್ಯುಲೆನ್ಸ್ ಕೂಡ ಇಲ್ಲಿಗೆ ಬರುವುದಿಲ್ಲ. ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಕುಡಿಯುವ ನೀರಿಗಾಗಿ ಮೂರು ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ತೊಂಬೆ ನಿರ್ಮಾಣ ಮಾಡಿದರೂ ಇದುವರೆಗೆ ಹನಿ ನೀರು ಕೂಡ ಬಂದಿಲ್ಲ. [ಬೆಂಗಳೂರು ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಕ್ರಾಂತಿ]

ಸೌಲಭ್ಯ ವಂಚಿತರಾಗಿರುವ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಿಸುತ್ತಾರಾ? ಮುಖ್ಯಮಂತ್ರಿ ಸಿದ್ದರಾಮಯ್ಯನವರಾದರೂ ಒಂದು ದಿನ ಈ ಗ್ರಾಮದತ್ತ ಪಯಣ ಬೆಳೆಸಲಿ.











Click it and Unblock the Notifications