ಎಚ್.ಡಿ.ಕೋಟೆ ತಂಬಾಕು ಮಾರುಕಟ್ಟೆಗೆ ಕಾರ್ಮಿಕರ ಮುತ್ತಿಗೆ
ಮೈಸೂರು, ಸೆಪ್ಟೆಂಬರ್ 11 : ತಂಬಾಕು ಮಂಡಳಿ ಹರಾಜು ಅಧೀಕ್ಷಕರು ಕಾರ್ಮಿಕ ವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ತಂಬಾಕು ಮಾರುಕಟ್ಟೆಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಶಾಂತಿಪುರ ಗ್ರಾಮದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆ 1 ಮತ್ತು 65ರಲ್ಲಿ ಕೆಲಸ ಮಾಡಲು ಟೆಂಡರ್ ಪಡೆದಿರುವ ಕಾರ್ಮಿಕರನ್ನು ಬಿಟ್ಟು ಹೊರಗಡೆಯಿಂದ ಕೂಲಿ ಕಾರ್ಮಿಕರನ್ನು ಕರೆಯಿಸಿ ಕೆಲಸ ಮಾಡಲು ಮುಂದಾದ ಅಧೀಕ್ಷಕ ಪಿ.ಕೆ.ವೀರಭದ್ರಯ್ಯ ಅವರ ನಡೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದರು.

ಕಳೆದ 35 ವರ್ಷಗಳಿಂದ ತಂಬಾಕು ಮಾರುಕಟ್ಟೆಯಲ್ಲಿ ಟೆಂಡರ್ ಪಡೆದುಕೊಂಡು ಕೂಲಿ ಕೆಲಸ ಮಾಡಿಕೊಂಡು ಬರುತ್ತಿರುವ ಕಾರ್ಮಿಕರನ್ನು ಹೊರಹಾಕಬೇಕೆಂಬ ಉದ್ದೇಶದಿಂದ ಅಧೀಕ್ಷಕ ಪಿ.ಕೆ.ವೀರಭದ್ರಯ್ಯ ತಮಗೆ ಬೇಕಾದವರಿಗೆ ಕೆಲಸ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಕಳೆದ ಮೂರು ವರ್ಷಗಳಿಂದಲೂ ಕಾರ್ಮಿಕರಿಗೆ ಒಂದಲ್ಲೊಂದು ಕಾರಣಕ್ಕೆ ಕಿರುಕುಳ ನೀಡುತ್ತಾ ಬಂದಿದ್ದಾರೆ. ಇಂತಹ ಕಾರ್ಮಿಕ ವಿರೋಧಿ ಅಧಿಕಾರಿ ನಮಗೆ ಬೇಡ. ಕೂಡಲೇ ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದರು.
ಈ ವೇಳೆ ಕಾರ್ಮಿಕರು ಹಾಗೂ ಅಧೀಕ್ಷಕ ಪಿ.ಕೆ.ವೀರಭದ್ರಯ್ಯ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಕೂಡಲೇ ಕಾರಿನಿಂದ ಇಳಿದ ಅಧೀಕ್ಷಕ ರೈತನ ಬೈಕ್ ಹಿಡಿದು ಪೊಲೀಸ್ ಠಾಣೆಗೆ ತೆರಳಿ ಕೆಲವರ ವಿರುದ್ಧ ದೂರು ನೀಡಲು ಮುಂದಾದರು.
ಈ ವೇಳೆ ಮಧ್ಯಪ್ರವೇಶಿಸಿದ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು. ಮುಂದಿನ ದಿನಗಳಲ್ಲಿ ಬೇರೆ ಕಾರ್ಮಿಕರನ್ನು ಕರೆಸುವುದಿಲ್ಲ ಹಾಗೂ ಕಾರ್ಮಿಕರಿಗೆ ಯಾವುದೇ ಕಿರುಕುಳ ನೀಡುವುದಿಲ್ಲ ಎಂದು ಅಧೀಕ್ಷಕರು ಒಪ್ಪಿಕೊಂಡ ಬಳಿಕ ಪ್ರತಿಭಟನೆ ಕೈಬಿಡಲಾಯಿತು.












Click it and Unblock the Notifications