ಹುಣಸೂರಿನಲ್ಲಿ ಬಸ್ ಅಪಘಾತ; ಮಹಿಳೆ ಸಾವು, 12 ಮಂದಿಗೆ ಗಾಯ
ಮೈಸೂರು, ಫೆಬ್ರವರಿ 22: ಅರುಣಾಚಲ ನೋಂದಣಿಯ ಕೇರಳ ಮೂಲದ ಪ್ರವಾಸಿ ಸ್ಲೀಪರ್ ಕೋಚ್ ಬಸ್ಸೊಂದು ಹುಣಸೂರಿನ ಲಕ್ಷ್ಮಣ ತೀರ್ಥ ನದಿಯ ಹಳೆ ಸೇತುವೆಯ ತಿರುವು ಬಳಿ ಮಗುಚಿ ಬಿದ್ದಿದ್ದು, ಒಬ್ಬ ಮಹಿಳೆ ಮೃತಪಟ್ಟು 12 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಫೆಬ್ರವರಿ 21, ಶುಕ್ರವಾರ ನಡೆದಿದೆ.
ಕೇರಳ ತಲಚೇರಿಯ ಶರೀನಾ (26) ಅಪಘಾತದಲ್ಲಿ ಮೃತಪಟ್ಟವರು. ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಕೇರಳ ಮತ್ತು ಮೈಸೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲಡ ಟ್ರಾವಲ್ಸ್ ಗೆ ಸೇರಿದ ಬಸ್ ಬೆಂಗಳೂರಿನಿಂದ ತಲಚೇರಿಗೆ ಹಳೇ ಸೇತುವೆ ಮೂಲಕ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಮತ್ತೊಂದು ಬಸ್ಗೆ ಡಿಕ್ಕಿ ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದ ತಾಲೂಕು ಕಚೇರಿಗೆ ತೆರಳುವ ರಸ್ತೆಯ ತಿರುವಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ತಕ್ಷಣ ಆಟೋ ಚಾಲಕರು ಬಸ್ ಗಾಜುಗಳನ್ನು ಒಡೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ನಂತರ ಬಸ್ಸನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು. ಡಿವೈಎಸ್ ಪಿ ಸುಂದರರಾಜ್, ಸಿಪಿಐ ಪೂವಯ್ಯ, ಎಸ್ಐ ಮಹೇಶ್, ಎಎಸ್ ಐ ಶೇಖರ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಇತರ ಪ್ರಯಾಣಿಕರನ್ನು ಬೇರೆ ಬಸ್ನಲ್ಲಿ ಕೇರಳಕ್ಕೆ ಕಳುಹಿಸಿದರು. ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications