ಮೈಸೂರು; ಪ್ರಿಯಕರನ ಜೊತೆ ಸೇರಿ ಗಂಡನ ಕೊಂದ ಹೆಂಡತಿ
ಮೈಸೂರು, ಜೂನ್ 1: ಮಹಿಳೆಯೊಬ್ಬಳು, ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ಅರಕೆರೆ ಗ್ರಾಮದ ಸತೀಶ್ (40) ಕೊಲೆಯಾದ ದುರ್ದೈವಿ, ಸತೀಶ್ ಪತ್ನಿ ಕಾವ್ಯ ಕೊಲೆ ಆರೋಪಿ.
ತನ್ನ ಪ್ರಿಯಕರ ಮಂಜನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಕಾವ್ಯಾ, ಈ ಕಾರಣಕ್ಕಾಗಿ ಮಂಜನ ಸ್ನೇಹಿತ ಗುರು ಹಾಗೂ ಮತ್ತಿಬ್ಬರ ಜೊತೆ ಸೇರಿ ಗಂಡನ ಕೊಲೆ ಮಾಡಲು ಪ್ಲಾನ್ ಹಾಕಿದ್ದಾಳೆ. ಕೊಲೆ ನಂತರ ಊರಿನ ಕೆರೆ ದಡದಲ್ಲಿ ಶವವನ್ನು ಹೂತು ಹಾಕಲಾಗಿದ್ದು, ಒಂದು ವಾರದಿಂದ ತನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ನಾಟಕವಾಡಿ ಕಾವ್ಯ ಅರಕರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪೊಲೀಸರು ತನಿಖೆ ಕೈಗೊಂಡು, ಸತೀಶನ ಮೊಬೈಲ್ ನಂಬರನ್ನು ಟ್ರ್ಯಾಕ್ ಮಾಡಿದಾಗ, ಗ್ರಾಮದ ಸುತ್ತಮುತ್ತವೇ ನೆಟ್ ವರ್ಕ್ ಇದ್ದದ್ದು ತೋರಿಸುತ್ತಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಕಾವ್ಯಾಳನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಸತ್ಯ ಬಾಯಿಬಿಟ್ಟಿದ್ದಾಳೆ. ಕೃತ್ಯದಲ್ಲಿ ಭಾಗಿಯಾದ ಐವರಲ್ಲಿ, ಪ್ರಿಯಕರ ಮಂಜ ಆತನ ಸಹಚರ ಗುರುವನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸತೀಶ್ 12 ವರ್ಷಗಳ ಹಿಂದೆ ಕೊತ್ತತ್ತಿ ಗ್ರಾಮದ ಕಾವ್ಯ ಎಂಬುವವರನ್ನು ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದು ಸಂಸ್ಕಾರ ಚೆನ್ನಾಗಿಯೇ ಇತ್ತು. ಆದರೆ ಕಾವ್ಯ ಮಂಜನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ಸತೀಶ್ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಮಂಜನಿಗೆ ಸತೀಶ್ ಕೊಲೆ ಮಾಡುವಂತೆ ತಿಳಿಸಿದ್ದಾಳೆ.
ಮಂಜ ತನ್ನ ಸ್ನೇಹಿತ ಗುರುವಿನೊಂದಿಗೆ ಸೇರಿ, ಸತೀಶ್ ನನ್ನು ಕರೆದುಕೊಂಡು ಬಂದು ಮದ್ಯ ಸೇವನೆ ಮಾಡುವಾಗ ಹಿಂದಿನಿಂದ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿ ಕೆರೆಯಂಗಳದಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದಾರೆ. ನಂತರ ಪತ್ನಿ ಕಾವ್ಯಾ ಅರಕೆರೆ ಪೊಲೀಸ್ ಠಾಣೆಗೆ ಹೋಗಿ ನನ್ನ ಗಂಡ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾಳೆ.
ಪ್ರಕರಣದ ಬೆನ್ನತ್ತಿದ ಪೊಲೀಸರು, ಕಾವ್ಯಾಳ ಮೊಬೈಲ್ ನಿಂದ ಮಂಜನಿಗೆ ಹೆಚ್ಚು ಬಾರಿ ಕರೆ ಹೋಗಿದ್ದರಿಂದ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.












Click it and Unblock the Notifications