ಮೊದಲು ದೇಶದೊಳಗಿನ ಉಗ್ರರ ಮಟ್ಟ ಹಾಕಬೇಕು: ಕುಮಾರಸ್ವಾಮಿ
ಮೈಸೂರು, ಫೆಬ್ರವರಿ 18: ಪಾಕಿಸ್ತಾನವು ಉಗ್ರ ರಾಷ್ಟ್ರ ಎಂದು ಜಾಗತಿಕವಾಗಿ ಘೋಷಣೆ ಮಾಡುವ ವಿಚಾರ ನಮ್ಮ ಕೈಯಲ್ಲಿಲ್ಲ ಆದರೆ ನಾವು ಕೇಂದ್ರಕ್ಕೆ ಒತ್ತಡ ಹಾಕಬಹುದು ಅಷ್ಟೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದರು.
ಕುಂಭಮೇಳದಲ್ಲಿ ಪಾಲ್ಗೊಳ್ಳಲು ಟಿ.ನರಸೀಪುರಕ್ಕೆ ಬಂದಿದ್ದ ಸಿಎಂ ಮಾಧ್ಯಮಗಳ ಜೊತೆ ಈ ವಿಷಯ ಮಾತನಾಡಿದರು. ಬೇರೆ ರಾಷ್ಟ್ರಗಳ ಮೇಲೆ ಒತ್ತಡ ಹೇರಿ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಣೆ ಮಾಡಬಹುದು ಎಂದು ಕುಮಾರಸ್ವಾಮಿ ಹೇಳಿದರು.
ಪಾಕಿಸ್ತಾನವನ್ನ ಉಗ್ರ ರಾಷ್ಟವಾಗಿ ಘೋಷಿಸುವುದು ಒತ್ತಟ್ಟಿಗಿರಲಿ, ದೇಶದ ಒಳಗೆ ಇರುವ ಉಗ್ರವಾದವನ್ನ ಮೊದಲು ಮಟ್ಟ ಹಾಕಬೇಕು. ಉಗ್ರರಿಂದ ಆಗುತ್ತಿರುವ ತೊಂದರೆಗಳನ್ನ ತಪ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಲೋಕಸಭೆ ಚುನಾವಣೆ ಸೀಟು ಹಂಚಿಕೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಾನು ಸರ್ಕಾರದಲ್ಲಿ ಆಡಳಿತ ಹೊಣೆ ಹೊತ್ತಿದ್ದೇನೆ. ಸೀಟು ಹಂಚಿಕೆ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದರು.
ದೇವೇಗೌಡ ಹಾಗೂ ವಿಶ್ವನಾಥ್ ಅವರುಗಳು ಈ ವಿಚಾರವಾಗಿ ಕಾಂಗ್ರೆಸ್ ಜೊತೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ವಿಷಯವಾಗಿ ನಾನು ನಿರ್ಣಯ ತೆಗೆದುಕೊಳ್ಳುವುದಿಲ್ಲ ಎಂದರು











Click it and Unblock the Notifications