ಬೇಸಿಗೆಗೂ ಮುನ್ನವೇ ಮೈಸೂರಿನಲ್ಲಿ ಕಂಡ ಕಲ್ಲಂಗಡಿ ಹಣ್ಣು!
ಮೈಸೂರು, ಫೆಬ್ರವರಿ 4: ನಗರಕ್ಕೆ ಬೇಸಿಗೆಯ ಬಿಸಿ ಇಷ್ಟಿಷ್ಟೇ ಕಾಲಿಡುವ ಹೊತ್ತಿಗೆ ಚೆನ್ನೈನ ಕಲ್ಲಂಗಡಿ ಹಣ್ಣು ಕಾಲಿಟ್ಟಿದೆ. ಪೌಷ್ಠಿಕ ಹಸಿಕಡಲೆ ಕಂತೆಯೂ ಗಮನ ಸೆಳೆಯುತ್ತಿದೆ. ನೀರುಹಣ್ಣು ಎಂದೇ ಖ್ಯಾತವಾಗಿರುವ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ, ಶಕ್ತಿ ವರ್ಧಕ ಹಣ್ಣು.
ಚೇತೋಹಾರಿ ಪಾನೀಯವಾಗಿಯೂ ಕಲ್ಲಂಗಡಿ ರಸಕ್ಕೆ ಬೇಡಿಕೆ ಕುದುರುತ್ತಿದ್ದು, ನಗರದೆಲ್ಲೆಡೆ ಕಲ್ಲಂಗಡಿ ರಾಶಿ ನೋಡುವ ಜನ ಅಲ್ಲಿ ವಾಹನ ನಿಲ್ಲಿಸಿ ಹಣ್ಣು ಸೇವನೆ ಮಾಡಿ, ಖರೀದಿಸದೇ ಮುಂದೆ ಹೋಗುತ್ತಿಲ್ಲ.
ನಗರ ವ್ಯಾಪ್ತಿಯಲ್ಲಿ, ರಸ್ತೆಗೆ ಹೊಂದಿಕೊಂಡ ಖಾಲಿ ಜಾಗಗಳಲ್ಲಿ ಹಣ್ಣಿನ ರಾಶಿ ಹಾಕಿಕೊಳ್ಳುವ ವ್ಯಾಪಾರಿಗಳು, ತಿಂಗಳುಗಟ್ಟಲೇ ಇಲ್ಲೇ ಬಿಡಾರ ಹೂಡಿ, ವ್ಯಾಪಾರಕ್ಕೆ ಮುಂದಾಗಿದ್ದಾರೆ. ಬಿಸಿಲಿನ ಶಾಖದಿಂದ ಪಾರಾಗಲು ಜನರು ಕಲ್ಲಂಗಡಿ ಹಣ್ಣುಗಳತ್ತ ಮುಖ ಮಾಡಿದ್ದಾರೆ.

ನಗರದ ಪ್ರಮುಖ ಬೀದಿಗಳಲ್ಲಿ ರಾಶಿ ರಾಶಿ ಕಲ್ಲಂಗಡಿ ಹಣ್ಣುಗಳು ದಾರಿಹೋಕರ ದಾಹ ತಣಿಸಲು ಕೈಬೀಸಿ ಕರೆಯುತ್ತಿವೆ. ಚೆನ್ನೈನಿಂದ ಹಣ್ಣನ್ನು ಖರೀದಿಸಿ ತಂದಿರುವ ವಿಶ್ವಾಸ್ , ಪ್ರತಿ ಕೆಜಿಗೆ 25 ರೂ.ರಂತೆ ಮಾರಾಟ ಮಾಡುತ್ತಿದ್ದಾರೆ. ಒಂದೊಂದು ಹಣ್ಣು ಕನಿಷ್ಠ 4 ಕೆ.ಜಿ. ತೂಗುವುದರಿಂದ ಹಣ್ಣನ್ನು ಇಡೀಯಾಗಿ ಖರೀದಿಸಬೇಕೆನ್ನುವವರು ಕನಿಷ್ಠ 100 ರೂ ಖರ್ಚು ಮಾಡಲೇಬೇಕು. ಇನ್ನೂ ಹೆಚ್ಚು ತೂಕದ ಹಣ್ಣು ಬೇಕೆಂದವರಿಗೆ ಅಲ್ಲಿ ಬೃಹತ್ ಗಾತ್ರದ ಹಣ್ಣುಗಳು ಕಾಯುತ್ತಿವೆ.
10 ಕೆ.ಜಿ. ಲೆಕ್ಕದಲ್ಲಿ ಖರೀದಿಸಲು ಆಗದ ಮಂದಿ, ಸ್ನೇಹಿತರು ಮತ್ತು ಮನೆ ಮಂದಿಯೊಂದಿಗೆ ಅಲ್ಲಿಗೇ ಬಂದು ಪ್ರತಿ ಹೋಳಿಗೆ 10 ರೂ. ರಂತೆ ಖರೀದಿಸಿ ಅಲ್ಲಿಯೇ ಸೇವಿಸಿ ಹೋಗುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲೂ ಕೆಲವು ವರ್ತಕರು ಕಲ್ಲಂಗಡಿ ಹಣ್ಣನ್ನು ಸಗಟಾಗಿ ಮಾರಾಟ ಮಾಡುತ್ತಿದ್ದು, ಅವರಿಂದ ಖರೀದಿಸುವ ಹಲವರು ಕೆಲವು ಬಡಾವಣೆಗಳಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದಾರೆ.

ಹಸಿ ಕಡಲೆಗೂ ಬೇಡಿಕೆ
ಕಲ್ಲಂಗಡಿ ಹಣ್ಣಿಗೂ ಮುಂಚೆ ಮಾರುಕಟ್ಟೆಗೆ ಬಂದ ಸಿಹಿ ಕಡಲೆಗೂ ಬೇಡಿಕೆ ಹೆಚ್ಚಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ತೂಕದ ಕಡಲೆಸೊಪ್ಪಿನ ಹೊರೆ ಒಂದಕ್ಕೆ 450ರಿಂದ 500 ರೂ ದರ ನಿಗದಿಯಾಗಿದೆ. ತಳ್ಳುವ ಗಾಡಿಗಳಲ್ಲಿ ಚಿಲ್ಲರೆಯಾಗಿ ಮಾರುವ ಮಂದಿ ಪ್ರತಿ ಕೆ.ಜಿ.ಗೆ 50 ರೂ ದರ ನಿಗದಿ ಮಾಡಿದ್ದಾರೆ. ಕೆ.ಜಿ.ಗೆ 30 ರೂ.ರಂತೆ ನಮಗೆ ಹಸಿಕಡಲೆ ಗಿಡಗಳು ದೊರಕುತ್ತಿವೆ. ಲಾಭಾಂಶವನ್ನಿಟ್ಟುಕೊಂಡು 45-50 ರೂ. ಕ್ಕೆ ಮಾರುತ್ತಿದ್ದೇನೆ ಎಂದು ವಿವೇಕಾನಂದ ನಗರದಲ್ಲಿ ಕಡ್ಲೆಗಿಡ ಮಾರುವ ರಾಜು ತಿಳಿಸುತ್ತಾರೆ.












Click it and Unblock the Notifications