ಮೈಸೂರಿನ ಮಾನಸ ಗಂಗೋತ್ರಿಗೆ ತಟ್ಟಿದ ನೀರಿನ ಕೊರತೆಯ ಬಿಸಿ
ಮೈಸೂರು, ಏಪ್ರಿಲ್ 27 : ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿ ಜಲಕ್ಷಾಮ ಉಂಟಾಗುತ್ತಿದ್ದು, ಇರುವ 40 ಬೋರ್ ವೆಲ್ ಗಳಲ್ಲಿ 15 ಬೋರ್ ವೆಲ್ ಗಳು ಕಾರ್ಯನಿರ್ವಹಿಸುತ್ತಿಲ್ಲ.
ಹಚ್ಚಹಸಿರಿನ 800 ಎಕರೆ ಪ್ರದೇಶದಲ್ಲಿರುವ ವಿವಿ ಕ್ಯಾಂಪಸ್ ಒಳಗೆ 75 ಕ್ಕೂ ಹೆಚ್ಚು ಕಟ್ಟಡಗಳಿವೆ. ಇಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೇ ಅಧ್ಯಾಪಕರ ಕ್ವಾರ್ಟರ್ಸ್, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಲ್ಲಿ ನೀರಿಗೆ ಬರ ಉಂಟಾಗಿದೆ.
ಕಳೆದ ಒಂದು ತಿಂಗಳ ದಿನಗಳ ಹಿಂದೆ ಹಾಸ್ಟೆಲ್ ನಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲವೆಂದು ಮಧ್ಯರಾತ್ರಿಯೇ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಬಟ್ಟೆ ತೊಳೆಯಲು ನೀರಿಲ್ಲ ತೊಂದರೆಯಾಗಿದೆ, ಶೌಚಾಲಯಗಳಲ್ಲೂ ಸರಿಯಾಗಿ ನೀರು ಬರುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು.

ಸರಿಯಾಗಿ ನೀರು ಬಾರದೇ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಬೇಸಿಗೆಯಲ್ಲಿ ಬಿಸಿಲು ಹೆಚ್ಚಾದ ಹಿನ್ನೆಲೆ ನೀರು ಮೇಲಕ್ಕೇರದಿರುವುದು ವಿವಿಗೆ ತಲೆನೋವಾಗಿ ಪರಿಣಮಿಸಿದೆ. ಸದ್ಯ ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿ ಎದುರಾಗಿರುವ ಈ ಸಮಸ್ಯೆಗೆ ಮೈಸೂರು ಮಹಾನಗರ ಪಾಲಿಕೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದೆ.
ಇನ್ನು ವಿವಿ ಕ್ವಾರ್ಟರ್ಸ್ ನಲ್ಲಿಯೂ ನಿಯಮಿತವಾಗಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಬಟ್ಟೆ ಒಗೆಯಲು ಹಾಗೂ ದಿನನಿತ್ಯದ ಕೆಲಸಕ್ಕೆ ನೀರು ಸಿಗದೆ ಪರಿತಪಿಸುವಂತಾಗಿದೆ. ನಾನಾ ವಿಭಾಗಗಳ ಶೌಚಾಲಯಗಳಲ್ಲೂ ಸಮರ್ಪಕವಾಗಿ ನೀರಿನ ಸರಬರಾಜಿಲ್ಲದೆ ವಿದ್ಯಾರ್ಥಿಗಳು ಹಿಡಿ ಶಾಪ ಹಾಕುವಂತಾಗಿದೆ.
ಹಾಸ್ಟೆಲ್ ನಲ್ಲಿ ಟ್ಯಾಂಕರ್ ನಿಂದ ನೀರು ಪಡೆಯಲು ವಿದ್ಯಾರ್ಥಿನಿಯರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬೇಸಿಗೆ ಬಂದರೆ ಗಂಗೋತ್ರಿ ಕ್ಯಾಂಪಸ್ ನಲ್ಲಿ ಸಾಮಾನ್ಯ. ಈ ಬಾರಿ 15 ಕೊಳವೆ ಬಾವಿಗಳು ಕೆಲಸ ಮಾಡುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ನಗರ ಪಾಲಿಕೆ ಗಮನಕ್ಕೂ ತರಲಾಗಿದೆ ಎನ್ನುತ್ತಾರೆ ಕುಲಪತಿ ಹೇಮಂತ ಕುಮಾರ್ .
ಇನ್ನಾದರೂ ಸಾವಿರಾರು ಜನರಿರುವ ಈ ಹಾಸ್ಟೆಲ್ ನಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದೇ ಎಂಬುದು ಎಲ್ಲರಲ್ಲೂ ಮೂಡಿರುವ ಪ್ರಶ್ನೆ.












Click it and Unblock the Notifications