ಏರಿದೆ ಕಬಿನಿ ಒಳಹರಿವು: ರೈತರ ಮೊಗದಲ್ಲೀಗ ಸಂತಸ
ಮೈಸೂರು, ಜುಲೈ 11: ಕೇರಳದ ವಯನಾಡಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನೀರಿನ ಮಟ್ಟ ಹತ್ತು ಅಡಿ ಏರಿಕೆಯಾಗಿದೆ.
ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯ ಕಬಿನಿ ಜಲಾಶಯದ ಒಟ್ಟು ಸಾಮರ್ಥ್ಯ 19.55 ಟಿಎಂಸಿಯಾಗಿದ್ದು, ಸದ್ಯಕ್ಕೆ ಡ್ಯಾಂನಲ್ಲಿ 4 ಟಿಎಂಸಿ ನೀರು ಮಾತ್ರ ಇದೆ. ಇಲ್ಲಿಂದ 500 ಕ್ಯೂಸೆಕ್ ನೀರನ್ನು ಜಲಾಶಯದ ಮುಂಭಾಗ ಇರುವ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ನದಿಗೆ ಬಿಡಲಾಗುತ್ತಿದೆ. ಈ ಹಿಂದಿನ ವರ್ಷ ಕಬಿನಿ ಜಲಾಶಯದಲ್ಲಿ 2282.20 ಅಡಿ ನೀರಿದ್ದು, ಜಲಾಶಯಕ್ಕೆ 35 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವಿತ್ತು. ಇದೀಗ ಕಬಿನಿ ನೀರಿನ ಮಟ್ಟದಲ್ಲಿ ಹತ್ತು ಅಡಿ ಏರಿಕೆ ಕಾಣುತ್ತಿದೆ.
ಇತ್ತ ಕಾವೇರಿ ನದಿ ಪಾತ್ರದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ನ ಒಳಹರಿವಿನಲ್ಲಿ ಅಲ್ಪ ಪ್ರಮಾಣದ ಏರಿಕೆ ಆಗಿದೆ. ಕೆಆರ್ ಎಸ್ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದಿನ ಮಟ್ಟ 80.75 ಅಡಿ ಆಗಿದೆ. ಒಳಹರಿವು 2,222 ಕ್ಯೂಸೆಕ್ ಇದ್ದು, 291 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ರೈತರ ಮೊಗದಲ್ಲಿ ಸಂತಸವೂ ಕಾಣಿಸುತ್ತಿದೆ.

ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 96 ಅಡಿ ತಲುಪುವವರೆಗೆ ಕೃಷಿ ಉದ್ದೇಶಕ್ಕೆ ನೀರು ಹರಿಸಲು ಅವಕಾಶವಿಲ್ಲ. ನಿಗದಿತ ಗಡಿ ದಾಟಿದ ನಂತರವಷ್ಟೇ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಾಲೆಗಳಿಗೆ ನೀರು ಹರಿಸುವ ಬೇಡಿಕೆ ಸಲ್ಲಿಸಬಹುದು ಎಂದು ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹೇಳಿದ್ದಾರೆ. ಇದರಿಂದಾಗಿ ರೈತರು ಸದ್ಯ ನಿಟ್ಟುಸಿರು ಬಿಡುತ್ತಿದ್ದಾರೆ.












Click it and Unblock the Notifications