ವಿಶ್ವನಾಥ್-ಸಾರಾ ಮಹೇಶ್ ಮಧ್ಯೆ ಮತ್ತೆ ಶುರುವಾಯ್ತ ಮಾತಿನ ಸಮರ?
ಮೈಸೂರು, ಅಕ್ಟೋಬರ್ 15: ಮಾಜಿ ಸಚಿವ ಸಾ.ರಾ ಮಹೇಶ್ ಮತ್ತು ಅನರ್ಹ ಶಾಸಕ ಎಚ್.ವಿಶ್ವನಾಥ್ ನಡುವಿನ ವಾಕ್ಸಮರ ಅಲ್ಪಾವಧಿ ಬ್ರೇಕ್ ನಂತರ ಪುನಃ ಮುಂದುವರಿಯುವ ಸೂಚನೆಗಳು ಕಂಡು ಬರುತ್ತಿವೆ. ವಿಶ್ವನಾಥ್ 25 ಕೋಟಿಗೆ ಬಿಜೆಪಿಗೆ ಮಾರಾಟವಾದ್ರು ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಸಾ.ರಾ ಮಹೇಶ್ ಗೆ ವಿಶ್ವನಾಥ್ ಸವಾಲು ಹಾಕಿದ್ದು, ಗುರುವಾರ ಬೆಳಿಗ್ಗೆ 9 ಘಂಟೆಗೆ ತಮ್ಮನ್ನು ಕೊಂಡುಕೊಂಡಿರುವವನನ್ನು ಕರೆದುಕೊಂಡು ಬರಬೇಕೆಂದೂ ಇಲ್ಲದಿದ್ದರೆ ನೀವು ಸುಳ್ಳ ಆಗುತ್ತೀರ ಎಂದೂ ಹೇಳಿದ್ದಾರೆ.
ಈ ಮೂಲಕ ಅವರ ನಡುವಿನ ಮಾತಿನ ಸಮರ ಮತ್ತೆ ಆರಂಭಗೊಂಡಂತಿದೆ.
Recommended Video

ರಿಯಲ್ ಎಸ್ಟೇಟ್ ನವರು ಎಂದು ವಿಶ್ವನಾಥ್ ಟಾಂಗ್
ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ವಿಶ್ವನಾಥ್, "ಇಂತಹ ಎಲ್ಲಾ ಹೇಳಿಕೆ ಕೇಳುತ್ತಿದ್ದರೆ ಮನಸ್ಸಿಗೆ ವ್ಯಥೆ ಆಗುತ್ತದೆ. ನಾನೊಬ್ಬ ರೈತನ ಮಗ, ನನ್ನ ಬಳಿ ಏನೂ ಇಲ್ಲ. ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕು ಎಂದುಕೊಳ್ಳುವವರಲ್ಲಿ ನಾನೂ ಒಬ್ಬ. ನನ್ನ ಮನೆಯಲ್ಲಿ ನಾಲ್ಕು ಜನ ಹೆಚ್ಚು ಬಂದರೆ ಕೂರಲು ಸ್ಥಳವಿಲ್ಲ. ಜಿಲ್ಲೆಯ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗುತ್ತಿದೆ. ಜಿಲ್ಲೆಯಲ್ಲಿ ಕೃಷಿ, ಹೈನುಗಾರಿಕೆ, ರೈತರು, ಉದ್ಯೋಗ ಸೇರಿದಂತೆ ಎಲ್ಲ ವಲಯವನ್ನು ಸಿದ್ಧಗೊಳಿಸುತ್ತಿದ್ದೇವೆ. ಇದೆಲ್ಲ ರಿಯಲ್ ಎಸ್ಟೇಟ್ ಮಾಡುವವರಿಗೆ ಗೊತ್ತಾಗುವುದಿಲ್ಲ" ಎಂದು ಸಾರಾ ಮಹೇಶ್ ಗೆ ಟಾಂಗ್ ಕೊಟ್ಟರು.

ಸುಪ್ರೀಂ ತೀರ್ಪಿನ ನಂತರ ತೀರ್ಮಾನ
ಉಪ ಚುನಾವಣೆಯಲ್ಲಿ 15ರಲ್ಲಿ ಅನರ್ಹರು ಕೇವಲ 3 ಗೆಲ್ಲುತ್ತಾರೆ ಅನ್ನುವ ಗುಪ್ತಚರ ಇಲಾಖೆ ಮಾಹಿತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಈ ತರಹದ ವರದಿಗಳು ಸಾಕಷ್ಟು ಸುಳ್ಳಾಗಿವೆ. 10 ಸ್ಥಾನ ಗೆಲ್ಲಲ್ಲ ಎಂದ ಕಡೆ 150 ಸೀಟು ಗೆದ್ದಿಲ್ಲವೆ? 150 ಸ್ಥಾನ ಗೆಲ್ಲುತ್ತೆ ಎನ್ನುವ ಕಡೆ 10 ಸೀಟುಗಳನ್ನೂ ಗೆದ್ದಿಲ್ಲ. ಜನ ಓಟು ಹಾಕಿದವರು ಗೆಲ್ಲುತ್ತಾರೆ ಬಿಡಿ. ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಸದ್ಯ ಪ್ರಕರಣ ಸುಪ್ರೀಂ ಅಂಗಳದಲ್ಲಿ ಇದೆ. ಸುಪ್ರಿಂ ತೀರ್ಪು ಬಂದ ಮೇಲೆ ನೋಡೋಣ" ಎಂದರು.

ಜನಸಂಘಟನೆಯ ಆಲೋಚನೆ
"ಸಿಎಂ ಯಡಿಯೂರಪ್ಪ ಬಳಿ ನನ್ನ ಕ್ಷೇತ್ರದ ಬಗ್ಗೆ ಚರ್ಚೆ ಮಾಡಿದ್ದೇನೆ. ನಾನು ಜನಾಭಿಪ್ರಾಯದ ಜೊತೆ ನಿಮ್ಮ ಬಳಿ ಬರುತ್ತೇನೆ ಎಂದಿದ್ದೇನೆ. ಇದು ಎಲೆಕ್ಷನ್ ಗಿಮಿಕ್ ಅಲ್ಲ, ಒಂದು ವರ್ಷದಿಂದ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದೇನೆ. ಇದಕ್ಕಾಗಿ ಮೈತ್ರಿ ಸರ್ಕಾರದಲ್ಲಿ ಕೆಎಸ್ ಆರ್ಟಿಸಿ ಡಿವಿಷನ್ ಆಫೀಸ್ ಮಾಡಿಸಿದ್ದೇನೆ. ಡಿಡಿಪಿಐ ಕಚೇರಿಗೆ ಸ್ಥಳ ಹುಡುಕಲಾಗುತ್ತಿದೆ. ನಂತರ ಜನರ ಸಂಘಟನೆ ಮಾಡುವುದು ನಮ್ಮ ಉದ್ದೇಶ. ಹಿಂದೆ ಸಮಿತಿಗಳ ಅಗತ್ಯ ಇತ್ತು, ಆದರೆ ಆಯೋಗಗಳೇ ಇಲ್ಲದೆ ತುಮಕೂರು ರಾಮನಗರ ಜಿಲ್ಲೆ ಆಗಿದೆ. ದೇಶವೇ ಭಾರತ ಪಾಕಿಸ್ತಾನ ಎಂದು ವಿಭಜನೆ ಆಗಿದೆ. ಹೀಗಾಗಿ ಹುಣಸೂರು ಜಿಲ್ಲೆ ಮಾಡಬೇಕೆಂಬ ಪ್ರಸ್ತಾಪ ಜನರ ಮುಂದೆ ಇಟ್ಟಿದ್ದೇನೆ. ಹುಣಸೂರು ಜಿಲ್ಲೆ ವಿಚಾರವಾಗಿ ನನಗೆ ಕೆಲವರು ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿದ್ದಾರೆ. ದೇವರಾಜ ಅರಸು ಅವರ ಹೆಸರು ಉಳಿಸಲು ಚಪ್ಪಲಿ ಏಟು ತಿನ್ನಲು ಸಿದ್ಧ ಎಂದರು. ಚುನಾವಣೆಗಾಗಿಯಂತು ಈ ಕೆಲಸ ಮಾಡುತ್ತಿಲ್ಲ. ಇದು ಭೌಗೋಳಿಕ ವ್ಯಾಪ್ತಿಯಲ್ಲ, ಜನರ ಭಾವನೆ" ಎಂದರು.

"ಜಿಲ್ಲೆ ವಿಭಜನೆ ಭೌಕೋಳಿಕ, ಕಿಲೋ ಮೀಟರ್ ಲೆಕ್ಕದ ಮೇಲಲ್ಲ"
30 ಕಿ.ಮೀಟರ್ ಗೆ ಒಂದು ಜಿಲ್ಲೆ ರಚನೆ ಮಾಡಲಾಗುತ್ತಾ ಎಂಬ ಮಾಜಿ ಸಿ.ಎಂ. ಸಿದ್ದರಾಮಯ್ಯ ಹೇಳಿಕೆಗೆ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದು, "ಇದು ಕಿ.ಮೀ ಲೆಕ್ಕವಲ್ಲ, ಭೌಗೋಳಿಕ ಅಂಶವೂ ಅಲ್ಲ. ಸಿದ್ದರಾಮಯ್ಯ ಹೊಸ ಜಿಲ್ಲೆ ಬೇಡ ಎಂದು ಕಿ.ಮೀ ಬಗ್ಗೆ ಹೇಳ್ತಾರೆ. ಯಾವುದೇ ಸಮಿತಿ ಅಧ್ಯಯನ ಮಾಡದೇ ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರಚನೆಯಾದವು. ಈ ಬಗ್ಗೆಯೂ ನನ್ನ ಸ್ನೇಹಿತರು ಅಧ್ಯಯನ ಮಾಡಬೇಕಿದೆ. ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗಲೇ ಚಾಮರಾಜನಗರ ಜಿಲ್ಲೆಯಾಗಿಲ್ವೇ? ಧಾರವಾಡ ಮೂರು ಜಿಲ್ಲೆ ಆಗಿಲ್ವೇ? ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಜಿಲ್ಲೆ ಆಗಬೇಕಿದೆ. ನಮ್ಮ ರಾಜ್ಯದಲ್ಲಿ ರಾಜ ಮಹಾರಾಜರ ಹೆಸರಲ್ಲಿ ಯಾವುದೇ ಜಿಲ್ಲೆಯಿಲ್ಲ. ಆದರೆ ತಮಿಳುನಾಡಿನಲ್ಲಿ ಪೆರಿಯಾರ್, ಎಂಜಿಆರ್ ಹೆಸರಲ್ಲಿ ಜಿಲ್ಲೆಯಿವೆ ಎಂದರು.

"ಕೆ.ಆರ್. ನಗರಕ್ಕೆ ಸಾರಾ ಮಹೇಶ್ ಮಾಲೀಕರಲ್ಲ"
ನನ್ನದು ಗಿಮಿಕ್ ಅಲ್ಲ, ಸಾ.ರಾ.ಮಹೇಶ್ ಮಾಡುತ್ತಿರುವುದು ಗಿಮಿಕ್. ನೀವೇ ಕೆ.ಆರ್.ನಗರವನ್ನು ಸಾಲಿಗ್ರಾಮ ಅಂತ ಒಡೆದಿದ್ದೀರಿ. ಕೆ.ಆರ್. ನಗರಕ್ಕೆ ಸಾರಾ ಮಹೇಶ್ ಮಾಲೀಕರಲ್ಲ. ಅದಕ್ಕೆ ಜನರು ಮಾಲೀಕರು. ಅದನ್ನು ನಾವು ಜನರ ಜತೆ ಮಾತನಾಡುತ್ತೇವೆ. ಕೆ.ಆರ್. ನಗರಕ್ಕೆ ಸಾರಾ ಮಹೇಶ್ ಯಾವುದೇ ಕಾರಣಕ್ಕೂ ಮಾಲೀಕರಲ್ಲ ಎಂದು ಮತ್ತೆ ತಿರುಗೇಟು ನೀಡಿದರು.












Click it and Unblock the Notifications