ಮೊದಲ ಸ್ತ್ರೀವಾದಿ ಲೇಖಕಿ ಡಾ. ವಿಜಯಾ ದಬ್ಬೆ ವಿಧಿವಶ
ಮೈಸೂರು, ಫೆಬ್ರವರಿ 23 : ಕನ್ನಡದ ಮೊದಲ ಸ್ತ್ರೀವಾದಿ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಖ್ಯಾತ ಕವಯಿತ್ರಿ, ಬರಹಗಾರ್ತಿ ಡಾ. ವಿಜಯಾ ದಬ್ಬೆ (66) ಅವರು ಶುಕ್ರವಾರ ಸಂಜೆ ಮೈಸೂರಿನಲ್ಲಿ ನಿಧನರಾದರು.
ಮೈಸೂರಿನ ವಿಜಯನಗರ 1ನೇ ಹಂತದಲ್ಲಿ ಸಹೋದರಿಯ ಮನೆಯಲ್ಲಿ ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದರು. ವಿಜಯನಗರದ ಸಹೋದರಿಯ ಮನೆಯಲ್ಲೇ ಶನಿವಾರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹಾಸನ ಜಿಲ್ಲೆಯ ಬೇಲೂರಿನ ದಬ್ಬೆಯಲ್ಲಿ 1951 ಜೂನ್ 1ರಂದು ಜನಿಸಿದ ವಿಜಯಾ ದಬ್ಬೆಯವರು, 12ಕ್ಕೂ ಹೆಚ್ಚು ಕೃತಿಗಳನ್ನು ಹಾಗು 60ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.

ಇವರ ಮೊದಲ ಕೃತಿ 'ಇರುತ್ತವೆ' ಕವನ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿ ಲಭಿಸಿತ್ತು. ಇವರ 'ಇತಿಗೀತಿಕೆ' ಕವನ ಸಂಕಲನಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ 1996ರ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿಯ ತೃತೀಯ ಬಹುಮಾನ ಲಭಿಸಿತ್ತು.
ವಿಜಯಾ ದಬ್ಬೆಯವರು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿದ್ದರು. ಪುಸ್ತಕ ಪ್ರಕಟಣೆ ಸಾಹಿತ್ಯ ಪತ್ರಿಕೆಯ ಸಂಪಾದಕಿ ಸಹ ಆಗಿದ್ದರು.
ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ರಾಜ್ಯೋತ್ಸವ, ಅತ್ತಿಮಬ್ಬೆ, ಅನುಪಮಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕಾವ್ಯ, ಕಾದಂಬರಿ, ವಿಮರ್ಶೆ, ಅಧ್ಯಯನ ಕ್ಷೇತ್ರದಲ್ಲಿ ಕೃಷಿ ಮಾಡಿದ್ದ ವಿಜಯಾ ದಬ್ಬೆ ಅವರು ಸಾಮಾಜಿಕ ಸುಧಾರಣೆ ಮತ್ತು ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು.












Click it and Unblock the Notifications