ಮೈಸೂರು : ಜೆಡಿಎಸ್ ಶಾಸಕನ ಮಗನ ಗೂಂಡಾಗಿರಿ
ಮೈಸೂರು, ನವೆಂಬರ್ 22 : ಶಾಸಕರ ಮಕ್ಕಳ ದರ್ಪ ಸ್ವತಃ ಶಾಸಕರಿಗೂ ಇರುವುದಿಲ್ಲವೇನೊ. ಇದು ಹಲವಾರು ಶಾಸಕ, ಸಚಿವರ ಮಕ್ಕಳ ವಿಷಯದಲ್ಲಿ ಕಂಡು ಬಂದಿರುವ ಸತ್ಯವೇ. ಬೇಕಾ ಬಿಟ್ಟಿ ಕಾರು ಚಲಾಯಿಸುವುದು, ಬಾರು ಪಬ್ಬುಗಳಲ್ಲಿ ಗೂಂಡಾಗಿರಿ ನಡೆಸುವುದು ಶಾಸಕ, ಸಚಿವರ ಮಕ್ಕಳು ತಮ್ಮ ಹಕ್ಕೆಂದೇ ಪರಿಗಣಿಸಿದಂತಿದೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ ಓದಿ...
ಮೈಸೂರಿನ ಕೆ.ಆರ್ ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಪುತ್ರ ಜಯಂತ್ ಗೆ ತಮ್ಮ ತಂದೆಯ ಅಧಿಕಾರದ ಮಧ ಅಂಟಿಕೊಂಡಂತಿದೆ. ಆತ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಅಮಾಯಕ ಹುಡುಗನನ್ನು ಕೋಲಿನಿಂದ ಹೊಡೆಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಶಾಸಕರ ಮಗ ಜಯಂತ್ ಹಾಗೂ ಆತನ ಸ್ನೇಹಿತರು ಯುವಕನೊಬ್ಬನಿಗೆ ಮನಬಂದಂತೆ ಥಳಿಸಿದ್ದಾರೆ. ಈ ವಿಡಿಯೋದಲ್ಲಿ ಏಟು ತಿಂದಿರುವ ಯುವಕ ಗೋಗರೆದರೂ ಬಿಡದ ಯುವಕರು ಕೋಲಿನಿಂದ ಥಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಟೀಕೆ ಎದುರಿಸುತ್ತಿದೆ.
ಜಯಂತ್ ನಿಂದ ಥಳಿತಕ್ಕೊಳಗಾದ ಯುವಕ ಚೇತನ್ ಎಂಬುದಾಗಿ ತಿಳಿದುಬಂದಿದೆ. ಚೇತನ್ ಫುಟ್ ವೇರ್ ಅಂಗಡಿಯಲ್ಲಿ ಚಿನ್ನದ ಸರ ಕಳ್ಳತನ ಮಾಡಿದ್ದ, ಸಿಸಿಟಿವಿ ನೋಡಿ ಶಾಸಕರ ಮಗ ಜಯಂತ್ ಚೇತನ್ ನನ್ನು ಕರೆತಂದು ವಿಚಾರಣೆ ಮಾಡುವ ನೆಪದಲ್ಲಿ ಥಳಿಸಿದ್ದಾನೆ. ಆದರೆ ಪೊಲೀಸರು ಮಾಡುವ ಕಾರ್ಯವನ್ನು ಶಾಸಕರ ಪುತ್ರ ಏಕೆ ಮಾಡಿದನೊ ತಿಳಿಯದಾಗಿದೆ. ಆದರೆ ಘಟನೆ ನಡೆದು ಒಂದು ವರ್ಷವಾಗಿದೆ ಎನ್ನಲಾಗುತ್ತಿದೆ.
ವಿಡಿಯೊ ಈ ಕುರಿತು ಸ್ಪಷ್ಟನೆ ನೀಡಿರುವ ಶಾಸಕ ಸಾ.ರಾ.ಮಹೇಶ್ ಬೇರೆಯದ್ದೇ ಕತೆ ಹೇಳಿದ್ದಾರೆ 'ಒಂದೂವರೆ ವರ್ಷದ ಹಿಂದೆ ನಡೆದ ಘಟನೆ ಇದು. ಮಗ ಜಯಂತ್ ಓದುತ್ತಿದ್ದ ಸಮಯದಲ್ಲಿ ಸ್ನೇಹಿತರು ಹೊಡೆದಾಡಿಕೊಂಡಿದ್ದರು. ಪ್ರಕರಣ ದೇವರಾಜ ಠಾಣೆಯ ಮೆಟ್ಟಿಲೇರಿತ್ತು. ಅಲ್ಲಿ ಸಂಧಾನ ನಡೆದು ಎರಡೂ ಕಡೆಯಿಂದಲೂ ಮುಚ್ಚಳಿಕೆ ಪತ್ರವನ್ನು ಬರೆದುಕೊಡಲಾಗಿತ್ತು. ಈಗ ಅನವಶ್ಯಕವಾಗಿ ವಿಡಿಯೊ ವೈರಲ್ ಮಾಡಲಾಗಿದೆ' ಎಂದು ಸ್ಪಷ್ಟೀಕರಣ ನೀಡಿದ್ದಾರೆ.












Click it and Unblock the Notifications