ಮೈಸೂರಿನಲ್ಲೀಗ ಚಳಿಗಾಲದ ಬಗ್ಗೆಯೇ ಹರಟೆ, ಸ್ವೆಟರ್ ಗೆ ಹೆಚ್ಚಿದ ಬೇಡಿಕೆ
ಮೈಸೂರು, ಜನವರಿ 3: ನಗರದಲ್ಲಿ ಕಳೆದೆರಡು ದಿನಗಳಿಂದ ಬೀಸುತ್ತಿರುವ ಶೀತಲ ಗಾಳಿಗೆ ಜನತೆ ಅಕ್ಷರಶಃ ಗಡಗಡ ನಡುಗುತ್ತಿದ್ದಾರೆ. ಬುಧವಾರ ಬೆಳಗ್ಗೆ 10.5 ಸೆಲ್ಸಿಯಸ್ಗೆ ಉಷ್ಣಾಂಶ ಕುಸಿದಿದ್ದು, ಜನಸಾಮಾನ್ಯರು ಹೈರಣಾಗಿದ್ದಾರೆ.
ಚಳಿಯಿಂದಾಗಿ ಆಗಸದಲ್ಲಿ ಮೋಡಗಳ ಸುಳಿವೇ ದೊರೆಯುತ್ತಿಲ್ಲ. ಜತೆಗೆ, ಶೀತಮಾರುತದ ಅಬ್ಬರ ಹೆಚ್ಚಾಗಿದೆ. ಇದರಿಂದ ಉಷ್ಣಾಂಶದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ತೀವ್ರ ಚಳಿ ಮತ್ತು ಶೀತಗಾಳಿಯಿಂದಾಗಿ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಮತ್ತು ಸಂಜೆ 7 ಗಂಟೆಯ ನಂತರ ಮಾರುಕಟ್ಟೆಯಲ್ಲಿ ಜನರ ದಟ್ಟಣೆ ಗಣನೀಯವಾಗಿ ಕಡಿಮೆ ಆಗಿದೆ. ಇದರಿಂದ ವ್ಯಾಪಾರ ಇಳಿಮುಖವಾಗಿದೆ.
ಹಗಲು ವೇಳೆಯಲ್ಲೂ ತಣ್ಣನೆಯ ವಾತಾವರಣ ಸೃಷ್ಟಿಯಾಗಿದ್ದು, ಜನರು ಸ್ವೆಟರ್ ಧರಿಸಿ ಓಡಾಡುವುದು ಸಾಮಾನ್ಯವಾಗಿದೆ. ಶೀತಗಾಳಿ ಬೀಸುತ್ತಿರುವುದರಿಂದ ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವರ ಸಂಖ್ಯೆಯೂ ಇಳಿದಿದೆ.
ಅಯ್ಯಪ್ಪ ಭಕ್ತರು ಚುಮು, ಚುಮು ಚಳಿಯಲ್ಲೇ ಚುರುಕಾಗಿ ಓಡಾಡುತ್ತಾ ಪ್ರಾತಃಕಾಲ ಪೂಜೆಗೆ ಸಿದ್ಧಗೊಳ್ಳುತ್ತಿರುವ ಮತ್ತು ಅಲೆಮಾರಿಗಳು ರಸ್ತೆ ಪಕ್ಕದಲ್ಲೇ ಬೆಂಕಿ ಹಾಕಿಕೊಂಡು ಮೈ ಕಾಯಿಸಿಕೊಳ್ಳುವ ದೃಶ್ಯಗಳು ನಸುಕಿನಲ್ಲಿ ನಗರದಲ್ಲಿ ಸಾಮಾನ್ಯವಾಗಿದೆ.

ಮಧ್ಯಾಹ್ನವೂ ಚಳಿ
ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದ್ದು, ಶಾಲೆಗೆ ಹೊರಟ ಪುಟಾಣಿಗಳು ಚಳಿಯಿಂದ ರಕ್ಷಿಸಿಕೊಳ್ಳಲು, ಸ್ವೆಟರ್ ಧರಿಸಿ, ತಲೆಗೆ ಉಣ್ಣೆಯ ಟೋಪಿ ಹಾಕಿಕೊಳ್ಳುತ್ತಿದ್ದಾರೆ. ಈಗ ಸಂಜೆಯೆಲ್ಲ, ಮಧ್ಯಾಹ್ನವೇ ಜಿಲ್ಲೆಯಲ್ಲಿ ಜನರು ನಡುಗಲು ಶುರು ಮಾಡಿದ್ದಾರೆ. ಇದೆಂತಹ ಚಳಿ. ಚಳಿಗಾಲ ಮುಗಿಯುವ ವೇಳೆ ನಡುಗಿಸುತ್ತಿದೆ ಎಂದು ಜನ ಮುದುಡಿಕೊಂಡು ಮಲಗುವಂತಾಗಿದೆ. ಬೆಳಿಗ್ಗೆ ವಾಯುವಿಹಾರಕ್ಕೆ ನಡುಗುತ್ತಲೇ ಹೋಗುವ ಮಂದಿ ಚಳಿಗಾಲದ ಬಗ್ಗೆಯೇ ಹರಟೆ ಹೊಡೆಯುತ್ತಿದ್ದಾರೆ.

ಈ ದೃಶ್ಯಗಳು ಸಾಮಾನ್ಯ
ಸಂಜೆ, ಬೆಳಗ್ಗೆ ಸಮಯ ಬಿಸಿ ಬಿಸಿ ಚಹಾ, ಕಾಫಿ, ಕಷಾಯ, ಸೂಪ್ ಹೀರಿ ಬೆಚ್ಚಾಗಾಗುತ್ತಿದ್ದಾರೆ. ಕುರುಕಲು ತಿಂಡಿ, ಬಿಸಿ ಮಿರ್ಚಿ, ಬಜ್ಜಿ, ಪಕೋಡ ಸವಿಯುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಬಡಾವಣೆ, ವಾಯುವಿಹಾರಕ್ಕೆ ಹೋಗುವ ಸ್ಥಳಗಳಲ್ಲಿ ಕಳೆದ ಐದಾರು ದಿನಗಳಿಂದ ಇಂತಹ ದೃಶ್ಯ ಕಂಡುಬರುತ್ತಿದೆ.

ಮಾರುಕಟ್ಟೆಯಲ್ಲಿ ಬೇಡಿಕೆ
ಚಳಿ ಶುರುವಾದ ಬಳಿಕ ಸ್ವೆಟರ್, ಹೊದಿಕೆಗಳ ಮಾರಾಟ ಮಾರುಕಟ್ಟೆಯಲ್ಲಿ ಚುರುಕು ಕಂಡಿದೆ. ನಗರದ ಮಾರುಕಟ್ಟೆಗಳಲ್ಲಿ ಸ್ವೆಟರ್, ಕೈ ಗವಸು, ಕಾಲು ಗವಸು (ಸಾಕ್ಸ್) ಪುಲ್ ಔಟ್, ಜರ್ಕಿನ್, ಶಾಲು,ಮಕ್ಕಳಿಗೆ ಕುಲಾಯಿ, ಮಂಕಿ ಕ್ಯಾಪ್, ಮಫ್ಲರ್ ಮಾರಾಟ ಕಂಡು ಬರುತ್ತಿದೆ.

ಮನ್ನೆಚ್ಚರಿಕೆ ಕೊಟ್ಟ ವೈದ್ಯರು
"ಶೀತ ಗಾಳಿ ಮತ್ತು ಚಳಿ ಜಾಸ್ತಿ ಆಗಿರುವುದರಿಂದ ದೇಹ ಬಿಸಿಯಾಗಿಡುವಂತಹ ಹೊದಿಕೆಗಳನ್ನು ಬಳಸಬೇಕು. ಸ್ವೆಟರ್, ಕ್ಯಾಪ್, ಸಾಕ್ಸ್ ಹಾಕಿಕೊಳ್ಳಬೇಕು. ಬೆಳಗ್ಗೆ ಮತ್ತು ಸಂಜೆ ಹೊರಗಡೆ ಸುತ್ತಾಟ ಸ್ವಲ್ಪ ಕಡಿಮೆ ಮಾಡಬೇಕು. ಅದರಲ್ಲೂ ಶ್ವಾಸಕೋಶ, ಅಸ್ತಮಾ, ಅಲರ್ಜಿ ಸಮಸ್ಯೆ ಇರುವವರು ಈ ಬಗ್ಗೆ ಹೆಚ್ಚಿನ ನಿಗಾವಗಹಿಸಬೇಕು" ಎಂದು ಡಾ. ಪ್ರಕಾಶ್ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಚಿಕ್ಕವರು, ದೊಡ್ಡವರು ಎಲ್ಲರೂ ಸ್ನಾನಕ್ಕೆ ಬಿಸಿ ನೀರನ್ನೇ ಬಳಸಬೇಕು. ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ ಬಾಧಿಸುವ ಸಾಧ್ಯತೆ ಇರುತ್ತದೆ. ಪೋಷಕರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.











Click it and Unblock the Notifications