'ಸಮಿಶ್ರ ಸರ್ಕಾರಕ್ಕೆ ಎಂ.ಬಿ ಪಾಟೀಲ್ ಅವರಿಂದ ಯಾವುದೇ ತೊಂದರೆ ಇಲ್ಲ'
ಮೈಸೂರು, ಜೂನ್.10 : ಚಾಮುಂಡಿ ಬೆಟ್ಟಕ್ಕೆ ನೂತನ ಪಶುಸಂಗೋಪನ ಸಚಿವ ವೆಂಕಟಪ್ಪ ನಾಡಗೌಡ ಭಾನುವಾರ ಭೇಟಿ ನೀಡಿದ್ದರು.
ಸಚಿವರಾದ ನಂತರ ಮೊದಲ ಬಾರಿಗೆ ದೇವಿ ದರ್ಶನ ಮಾಡಲು ಬಂದ ನಾಡಗೌಡ ಮಾಧ್ಯಮಗಳ ಜೊತೆ ಮಾತನಾಡಿ, ನನಗೆ ಕೊಟ್ಟಿರುವ ಖಾತೆ ತೃಪ್ತಿ ಇದೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.
ನನಗೆ ಹುದ್ದೆ ಬೇಕು ಎಂಬ ವರದಿಗಳು ಸುಳ್ಳು ಎಂ.ಬಿ. ಪಾಟೀಲ್
ಇನ್ನು ಎರಡು ಮೂರು ದಿನಗಳಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳ ಸಭೆ ಕರೆಯುತ್ತೇನೆ. ಈ ಸಮಿಶ್ರ ಸರ್ಕಾರಕ್ಕೆ ಎಂ.ಬಿ ಪಾಟೀಲ್ ಅವರಿಂದ ಯಾವುದೇ ತೊಂದರೆ ಇಲ್ಲ. ಅವರ ಜೊತೆ ಯಾವ ಶಾಸಕರೂ ಇಲ್ಲ. ಇದೆಲ್ಲಾ ಊಹಾಪೋಹ ಎಂದು ಸ್ಪಷ್ಟಪಡಿಸಿದರು.
ರೈತರ ಸಾಲ ಮನ್ನ ವಿಚಾರ ಸಂಬಂಧ, ಪ್ರತಿ ಪಕ್ಷ ಗಡುವು ನೀಡುವುದು ಸರಿಯಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ಸಿಂಧನೂರಿನಿಂದ ಎರಡನೆಯ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವೆಂಕಟರಾವ್ ನಾಡಗೌಡ ಇದೇ ಪ್ರಥಮಬಾರಿಗೆ ಸಿಂಧನೂರಿನಿಂದ ಸಚಿವರಾಗುತ್ತಿದ್ದಾರೆ. ಈ ಕ್ಷೇತ್ರದಿಂದ ಇಲ್ಲಿಯವರೆಗೂ ಒಬ್ಬರು ಸಚಿವರಾಗಿದ್ದಿಲ್ಲ.
ಇನ್ನೊಂದು ಕಡೆ ಈ ಜಿಲ್ಲೆಯಲ್ಲಿ ಹತ್ತು ವರ್ಷದಿಂದ ಜಿಲ್ಲೆಯವರು ಸಚಿವರಾಗಿದ್ದಿಲ್ಲ. ಈ ಎರಡು ಶಾಪವನ್ನು ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿಮುಕ್ತಿಗೊಳಿಸಿದೆ.