ಸುತ್ತೂರಿನ ಸಾಮೂಹಿಕ ವಿವಾಹದಲ್ಲಿ ಯುವಜನತೆಗೆ ಕಿವಿ ಮಾತು ಹೇಳಿದ ವೀರೇಂದ್ರ ಹೆಗ್ಗಡೆ
ಮೈಸೂರು, ಜನವರಿ 22: ನಿನ್ನೆಯಿಂದ ಮೈಸೂರಿನಲ್ಲಿ ಪ್ರಸಿದ್ಧ ಸುತ್ತೂರು ಜಾತ್ರೆ ಆರಂಭಗೊಂಡಿದೆ. ಇಂದು ಜಾತ್ರೆಯ ಭಾಗವಾಗಿ ಸಾಮೂಹಿಕ ವಿವಾಹ ಮಹೋತ್ಸವವನ್ನು ಏರ್ಪಡಿಸಲಾಗಿದ್ದು, ಹೊಸ ಬಾಳಿಗೆ ಕಾಲಿಟ್ಟ ನೂತನ ವಧು ವರರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕಿವಿಮಾತು ಹೇಳಿದ್ದಾರೆ.
ವಿವಾಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಸುತ್ತೂರು ಶ್ರೀಗಳ ಹಾಗೂ ಪೂಜ್ಯರ ಸಮ್ಮುಖದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಶ್ರೇಷ್ಠವಾದುದು. ಆದರೆ ಇತ್ತೀಚಿನ ಸಿನಿಮಾಗಳಲ್ಲಿ ಮದುವೆಯನ್ನು ಹಾಸ್ಯಾಸ್ಪದವಾಗಿ ತೋರಿಸಲಾಗುತ್ತಿದೆ. ಮದುವೆಗೆ ತನ್ನದೇ ಆದ ಪಾವಿತ್ರ್ಯತೆ ಇದೆ. ನಾನು ಸಂಬಂಧಿಕರ ಮದುವೆಗೆ ಹೋಗುವುದಿಲ್ಲ. ಆದರೆ ಸುತ್ತೂರಿನಲ್ಲಿ ನಡೆಯುತ್ತಿರುವುದು ಪಾವಿತ್ರ್ಯತೆಯ ಮದುವೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ" ಎಂದಿದ್ದಾರೆ.
"ಇಲ್ಲಿ ಮದುವೆಯಾಗುತ್ತಿರುವವರು ಪುಣ್ಯ ಮಾಡಿದ್ದಾರೆ. ದಾಂಪತ್ಯದ ಗಾಲಿಯಲ್ಲಿ ಹೊರಡುವ ಕಾಲ ಇದು. ಮದುವೆಯಾಗಿ ಎಂದರೆ ಜವಾಬ್ದಾರಿ ಹೆಗಲಿರಗೇರಿಸಿಕೊಳ್ಳುವುದು. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಸರಳ ಜೀವನ ನಡೆಸಬೇಕು. ಪತಿ ಪತ್ನಿ ಇಬ್ಬರಿಗೂ ಸಮಾನ ಜವಾಬ್ದಾರಿ ಇರುತ್ತದೆ. ಆದರೆ ಗಂಡಸು ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಇಂದಿಗೂ ಮುಂದುವರಿದಿರುವುದು ವಿಪರ್ಯಾಸ. ಯುವಪೀಳಿಗೆ ದುಂದು ವೆಚ್ಚ ಮಾಡದೇ ಸರಳವಾಗಿ ಮದುವೆಯಾಗಬೇಕು" ಎಂದು ಸಲಹೆ ನೀಡಿದರು.

ಈ ಬಾರಿ ಸುತ್ತೂರಿನ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 178 ಜೋಡಿಗಳ ವಿವಾಹ ಮಹೋತ್ಸವ ನೆರವೇರಿತು. ವಿಶೇಷವಾಗಿ ತಮಿಳುನಾಡಿನ 2 ಜೋಡಿಗಳು ಭಾಗಿಯಾಗಿದ್ದರು.












Click it and Unblock the Notifications