ದಸರಾ ಆಹಾರ ಮೇಳದಲ್ಲಿ ನಾಲಗೆ ತಣಿಸುತ್ತಿವೆ ಘಮಘಮಿಸುವ ತಿನಿಸುಗಳು
ಮೈಸೂರು, ಸೆಪ್ಟೆಂಬರ್ 30: ದಸರಾ ಅಂಗವಾಗಿ ನಡೆಯುತ್ತಿರುವ ಆಹಾರ ಮೇಳ ಭೋಜನ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಕರ್ನಾಟಕದ ಹಲವು ಕಡೆಗಳ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಸಿಗುತ್ತಿರುವ ಕಾರಣ ಜನ ಮುಗಿಬಿದ್ದು ತಮಗಿಷ್ಟವಾದ ತಿಂಡಿ, ತಿನಿಸುಗಳನ್ನು ಸೇವಿಸಿ ಖುಷಿ ಪಡುತ್ತಿದ್ದಾರೆ.
ನಗರದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮೈದಾನ, ಲಲಿತ ಮಹಲ್ ಹತ್ತಿರದ ಮುಡಾ ಮೈದಾನ ಈ ಎರಡು ಕಡೆಗಳಲ್ಲಿ 12 ದಿನಗಳ ಕಾಲ ಮೇಳ ನಡೆಯುತ್ತಿದೆ. ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ 95 ಮಳಿಗೆಗಳು ಮತ್ತು ಲಲಿತ ಮಹಲ್ ಹತ್ತಿರದ ಮುಡಾ ಮೈದಾನದಲ್ಲಿ 75 ಮಳಿಗೆಗಳನ್ನು ತೆರೆಯಲಾಗಿದೆ. ಬೊಂಬು ಬಿರಿಯಾನಿ, ಗೆಣಸು, ಜೇನುತುಪ್ಪ, ಬಿದಿರಕ್ಕಿ ಪಾಯಸ, ನಳ್ಳಿ ಸಾರು, ಕಾಡುಸೊಪ್ಪು, ಕರಳೇ ಪಲ್ಯ, ಮುದ್ದೆ ಉಪ್ಸಾರು, ರಾಗಿಮುದ್ದೆ, ಹುರಳಿಕಟ್ಟು ಸೇರಿದಂತೆ ಆದಿವಾಸಿ ಸಂಪ್ರದಾಯದ ರುಚಿಕರ ಹಾಗೂ ನೈಸರ್ಗಿಕ ತಿನಿಸುಗಳು ಇಲ್ಲಿ ದೊರೆಯಲಿವೆ.

ಹಾಡಿ ಮನೆಯಲ್ಲಿ ಕಾಡು ಕೊತ್ತಂಬರಿ, ಕಾಡು ಕರಿಬೇವು, ಕಾಡು ಅರಿಶಿಣ, ಕಾಡು ಗೆಣಸು, ಬಿದಿರು ಬೊಂಬಿನಿಂದ ತಯಾರಿಸಲಾದ ಬಿರಿಯಾನಿ, ಬಿದಿರು ಕಳ್ಳೆಪಲ್ಯ, ಬಿದಿರು ಅಕ್ಕಿ ಪಾಯಸ, ಕಾಡು ಬಾಳೆಹಣ್ಣು ಸೇರಿದಂತೆ ವಿವಿಧ ಆದಿವಾಸಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಬೊಂಬು ಬಿರಿಯಾನಿಗೆ 180 ರೂ, ಜೇನುತುಪ್ಪ ಮಿಶ್ರಿತ ಕಾಡು ಗೆಣಸಿಗೆ 50 ರೂ., ಮಾಕಳಿ ಬೇರಿನ ಟೀಗೆ 20 ರೂ, ಏಡಿ ಸಾರು ಮತ್ತು ರಾಗಿ ಮುದ್ದೆಗೆ 100 ರೂ. ನಿಗದಿಪಡಿಸಲಾಗಿದೆ. ಇಲ್ಲಿ ಗಿಡಮೂಲಿಕೆ ತಜ್ಞೆ ನಾಗಮ್ಮ ಎಂಬುವವರು ಹಲವಾರು ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಿ ನೀಡುತ್ತಿದ್ದಾರೆ.












Click it and Unblock the Notifications