ಜಂಬೂಸವಾರಿಗೆ ಮುನ್ನ ನಡೆಯುತ್ತೆ ವಜ್ರಮುಷ್ಠಿ ಕಾಳಗ...!
ಮೈಸೂರು, ಅಕ್ಟೋಬರ್ 19 : ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿವೊಂದೇ ಅಲ್ಲ. ಅದರ ಸುತ್ತಲೂ ಹತ್ತಾರು ಸಂಪ್ರದಾಯಗಳು ತಳಕು ಹಾಕಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.
ಕಳೆದ ಒಂಬತ್ತು ದಿನಗಳಿಂದ ಇಡೀ ಮೈಸೂರು ನಗರ ದಸರಾ ಸಂಭ್ರಮದಲ್ಲಿ ಮಿಂದೆದ್ದಿದೆ. ಮಳೆಯ ನಡುವೆಯೂ ಜನ ದಸರಾವನ್ನು ಆನಂದಿಸಿದ್ದಾರೆ. ಆದರೆ, ಶುಕ್ರವಾರ ಜಂಬೂಸವಾರಿ ಬನ್ನಿಮಂಟಪಕ್ಕೆ ತೆರಳಿ, ರಾತ್ರಿ ಅಲ್ಲಿ ಪಂಜಿನ ಕವಾಯತು ನಡೆಯುವುದರೊಂದಿಗೆ ಈ ಬಾರಿಯ ದಸರಾಕ್ಕೆ ತೆರೆಬೀಳಲಿದೆ.
ಆದರೆ, ಜಂಬೂಸವಾರಿಗೂ ಮುನ್ನ ಮುಂಜಾನೆಯಿಂದಲೇ ಅರಮನೆಯಲ್ಲಿ ಸಂಪ್ರದಾಯದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅದರಲ್ಲಿ ವಜ್ರಮುಷ್ಠಿ ಕಾಳಗವೂ ಒಂದಾಗಿದೆ. ಇದು ಸಾಂಪ್ರದಾಯಿಕವಾಗಿ ನಡೆದು ಬಂದ ರೂಢಿಯಾಗಿದೆ.

ವಜ್ರಮುಷ್ಠಿ ಕಾಳಗ ಎನ್ನುವುದು ಒಂದು ರೀತಿಯಲ್ಲಿ ಸಮರಕಲೆ ಮತ್ತು ಮಲ್ಲಯುದ್ಧದಂತೆ ಆದರೂ ಅದಕ್ಕಿಂತ ಭೀಕರ ಎನ್ನುವುದನ್ನು ನಾವು ಒಪ್ಪಲೇ ಬೇಕಾಗುತ್ತದೆ. ಇದು ಇತರೆ ಕುಸ್ತಿಗಿಂತ ಅಪಾಯಕಾರಿ.
ತಲೆಬೋಳಿಸಿ ದೃಢಕಾಯವಾಗಿರುವ ಅನುಭವಿ ವಸ್ತಾದ್ ತನ್ನ ಬಲಗೈಗೆ (ಆನೆದಂತ ಅಥವಾ ಸಾರಂಗದ ಕೊಂಬಿನಿಂದ ತಯಾರಿಸಿದ ಆಯುಧ) ವಜ್ರನಖವನ್ನು ಹಿಡಿದು ಎಡಗೈಗೆ ಬಟ್ಟೆ ಕಟ್ಟಿಕೊಂಡಿರುತ್ತಾನೆ. ಇಂತಹ ನಾಲ್ವರು ಅಖಾಡದಲ್ಲಿ ಸೆಣೆಸಾಡುತ್ತಾರೆ. ತನ್ನ ಬಳಿಯಿರುವ ವಜ್ರನಖದಿಂದ ಎದುರಾಳಿಯ ಮೇಲೆ ಹೋರಾಡಬೇಕು ಹೊಡೆತವನ್ನು ಕೂಡ ಆತನ ತಲೆ ಮೇಲೆಯೇ ಹೊಡೆಯಬೇಕು. ಹೀಗೆ ಹೊಡೆದ ಏಟು ತಲೆಗೆ ತಾಗಿ ರಕ್ತ ಚಿಮ್ಮಿದರೆ ಆತ ಸೋತ ಎಂದರ್ಥ.

ಆದರೆ, ಇಬ್ಬರೂ ದೃಢಕಾಯರಾಗಿರುವುದರಿಂದ ಪ್ರತಿ ಪ್ರಹಾರವನ್ನು ತಪ್ಪಿಸಿಕೊಂಡು ಕಾಳಗ ನಡೆಸುತ್ತಾರೆ. ಇದು ನೋಡಲು ರೋಚಕವಾಗಿರುತ್ತದೆ. ಜಟ್ಟಿಗಳ ತಲೆ ಮೇಲೆ ರಕ್ತ ಹೊರ ಬರುವವರೆಗೂ ಕಾಳಗ ನಡೆಯುತ್ತದೆ. ರಕ್ತ ಬಂದ ಬಳಿಕ ಕಾಳಗ ಕೊನೆಗೊಳ್ಳುತ್ತದೆ.
ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುವ ಫೈಲ್ವಾನರು ಕಟ್ಟುನಿಟ್ಟಿನ ವೃತವನ್ನು ಸುಮಾರು ಒಂಬತ್ತು ದಿನಗಳ ಕಾಲ ಮಾಡುವುದಲ್ಲದೆ, ಒಂದು ತಿಂಗಳ ಹಿಂದಿನಿಂದಲೇ ತಾಲೀಮು ನಡೆಸಿ ಸಿದ್ಧರಾಗುತ್ತಾರೆ. ದಸರಾ ದಿನ ತಮ್ಮ ಕೌಶಲ್ಯ ಪ್ರದರ್ಶಿಸುವ ಮೂಲಕ ವಜ್ರಮುಷ್ಠಿ ಕಾಳಗಕ್ಕೆ ಮೆರುಗು ತರುವುದು ಹಿಂದಿನಿಂದಲೂ ನಡೆದು ಬಂದಿದೆ.












Click it and Unblock the Notifications