ಉಪಚುನಾವಣೆ ಕಹಿ ಅನುಭವ ಬರೆಯುತ್ತಿದ್ದಾರೆ ಶ್ರೀನಿವಾಸ ಪ್ರಸಾದ್!
ಮೈಸೂರು, ಡಿಸೆಂಬರ್ 24 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ಕೈಬಿಟ್ಟ ಕಾರಣಕ್ಕೆ ಕಾಂಗ್ರೆಸ್ ಪಕ್ಷದಿಂದ ಹೊರ ಬಂದು ಬಿಜೆಪಿ ಸೇರಿರುವ ವಿ.ಶ್ರೀನಿವಾಸ ಪ್ರಸಾದ್ ಅವರು ಉಪಚುನಾವಣೆಯಲ್ಲಿ ಸೋಲುಂಡ ಬಳಿಕ ರಾಜಕೀಯದಿಂದ ಸ್ವಲ್ಪ ಮಟ್ಟಿಗೆ ದೂರವಿದ್ದಾರೆ.
ಈಗ ಅವರೇನು ಮಾಡುತ್ತಿದ್ದಾರೆ? ಎಂಬ ಕುತೂಹಲಕ್ಕೆ ಅವರಿಂದಲೇ ಉತ್ತರ ಸಿಕ್ಕಿದೆ. ಅವರ ರಾಜಕೀಯ ಬದುಕಿನಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆ ಸೋಲು ನಿಜಕ್ಕೂ ಮರೆಯಲಾರದ ಆಘಾತವಾಗಿದೆ. ಅದರ ಜೊತೆಗೆ ಅತಿಯಾಗಿ ಕಾಡುತ್ತಿರುವ ಉಪ ಚುನಾವಣೆ ಅವರನ್ನು ಬರೆಯುವಂತೆ ಪ್ರೇರೇಪಿಸಿದೆ ಎಂದರೂ ತಪ್ಪಾಗಲಾರದು.

ಹೀಗಾಗಿಯೇ ಅವರು ಉಪಚುನಾವಣೆ ಅವಶ್ಯಕತೆ ಇದೆಯೇ? ಉಪ ಚುನಾವಣೆಯ ಹಿಂದಿನ ರಹಸ್ಯ ಹಾಗೂ ಆಗು ಹೋಗುಗಳ ಕುರಿತಂತೆ ತಾವೇ ಸ್ವಂತ ಅನುಭವ ಆಧಾರದಲ್ಲಿ ಪುಸ್ತಕವೊಂದನ್ನು ಬರೆಯುತ್ತಿದ್ದಾರಂತೆ. ಪುಸ್ತಕವು ಅಂತಿಮ ಘಟ್ಟ ತಲುಪಿದ್ದು, ನೂತನ ವರ್ಷದಲ್ಲಿ ಈ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಚಿಂತನೆಯಲ್ಲಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಿಂದ ದೂರ ಉಳಿಯಲಿರುವ ಅವರು ತಮ್ಮ ವ್ಯಾಪ್ತಿಯ 4 ಕ್ಷೇತ್ರಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಗೆಲುವಿಗೆ ಬೇಕಾದ ಮಾರ್ಗದರ್ಶನವನ್ನು ಮಾಡಲಿದ್ದಾರಂತೆ.
1977 ರಿಂದ ಇಲ್ಲಿವರೆಗೆ ರಾಜಕೀಯದಲ್ಲಿ ರಾಜ್ಯ, ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಶ್ರೀನಿವಾಸ ಪ್ರಸಾದ್ ಅವರು ಅದೇ ಅನುಭವವನ್ನು ಮುಂದಿಟ್ಟುಕೊಂಡು ಅದರ ಆಧಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಲಹೆ, ಮಾರ್ಗದರ್ಶನ ನೀಡಲಿದ್ದಾರಂತೆ.
ಮುಂಬರುವ ಚುನಾವಣೆ ಅಷ್ಟು ಸುಲಭವಲ್ಲ. ಭಾರೀ ಜಿದ್ದಾಜಿದ್ದಿ ನಡೆಯುವುದಂತು ಖಚಿತ. ಜತೆಗೆ ಸಿದ್ದರಾಮಯ್ಯ ಅವರ ವಿರುದ್ಧವೇ ತಿರುಗಿ ಬಿದ್ದಿರುವ ಶ್ರೀನಿವಾಸ ಪ್ರಸಾದ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಿ, ಸೇಡು ತೀರಿಸಿಕೊಳ್ಳುವ ಜರೂರತ್ತಿದೆ. ಮುಂದೇನಾಗುತ್ತೆ? ಎಂಬುದನ್ನು ಕಾದು ನೋಡ ಬೇಕಾಗಿದೆ.












Click it and Unblock the Notifications